ಮೋಸ್ಟ್‌ವಾಂಟೆಡ್ ಪಟ್ಟಿಯಲ್ಲಿ ಮುಸ್ಲಿಂ ಯುವಕರ ಹೆಸರು ಮಾತ್ರ ಯಾಕೆ?: ಪಿಎಫ್‌ಐ ಪ್ರಶ್ನೆ

Update: 2016-11-30 13:28 GMT

ಮಂಗಳೂರು, ನ.30: ಜಿಲ್ಲೆಯ ಪೊಲೀಸ್ ಠಾಣೆಗಳ ಸಹಿತ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾದ ‘ಮೋಸ್ಟ್ ವಾಂಟೆಡ್’ ಪಟ್ಟಿಯ ಬ್ಯಾನರ್‌ಗಳಲ್ಲಿ ಕೇವಲ ಮುಸ್ಲಿಂ ಯುವಕರ ಹೆಸರನ್ನೊಳಗೊಂಡ ಫೊಟೋವನ್ನು ಮಾತ್ರ ಹಾಕಲಾಗಿದೆ. ಯಾಕೆ, ಕ್ರಿಮಿನಲ್ ಕೃತ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರು ತೊಡಗಿಸಿಲ್ಲವೇ? ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್, ಜಗದೀಶ್ ಕಾರಂತರ ಹೆಸರು ನೆನಪಿಗೆ ಬರುತ್ತಿಲ್ಲವೇ? ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಉಳ್ಳಾಲದ ಸಫ್ವಾನ್‌ರನ್ನು ಕೊಲೆ ಮಾಡಿದ ಸಂಘಪರಿವಾರದವರ ಫೋಟೋ ಪೊಲೀಸ್ ಇಲಾಖೆಗೆ ಲಭಿಸಿಲ್ಲವೇ? ಎಂದು ಪಿಎಫ್‌ಐ ಪ್ರಶ್ನಿಸಿದೆ.

ಮೈಸೂರು ಜೈಲಿನಲ್ಲಿ ವಿಚಾರಣಾಧೀನ ಕೈದಿ ಕಾವೂರಿನ ಮುಸ್ತಫಾನ ಹತ್ಯೆಯ ಹಿಂದಿರುವ ವ್ಯವಸ್ಥಿತ ಸಂಚಿನ ಬಗ್ಗೆ ನ್ಯಾಯಾಂಗ ತನಿಖೆಗೊಳಪಡಿಸಬೇಕು ಮತ್ತು ಮುಸ್ತಫಾನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು  ಬುಧವಾರ ಪಿಎಫ್‌ಐ ದ.ಕ.ಜಿಲ್ಲಾ ಸಮಿತಿಯು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿದರು.

ವಿಚಾರಣಾಧೀನ ಕೈದಿ ಮುಸ್ತಫಾನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಇದರ ಹಿಂದಿನ ನಿಗೂಢತೆಯನ್ನು ಹೊರಗೆಡಹಲು ಸಂಘಪರಿವಾರದ ಮುಖಂಡರನ್ನು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ ಇಲ್ಯಾಸ್ ಮುಹಮ್ಮದ್ ತುಂಬೆ, ಪೊಲೀಸ್ ಇಲಾಖೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ನುಸುಳಿದ್ದಾರೆ. ಅದರ ಫಲವಾಗಿ ಟಿಪ್ಪು ಜಯಂತಿಯಂದೇ ಜೈಲಿನಲ್ಲಿ ಮುಸ್ತಫಾನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.

ಮುಸ್ತಫಾನ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ರೌಡಿಶೀಟ್ ದಾಖಲಿಸಿದ್ದಾರೆ. ಈ ಕುರಿತ ವಿಚಾರಣಾ ಆಯೋಗವು ಪೊಲೀಸ್ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಆದರೂ ಪೊಲೀಸ್ ಇಲಾಖೆಯು ಸಂಘ ಪರಿವಾರದ ಜೊತೆ ಸೇರಿ ಮುಸ್ಲಿಮರ ಮೇಲೆ ದೌರ್ಜನ್ಯ ಮುಂದುವರಿಸಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರಲ್ಲದೆ, ಸಂಘ ಪರಿವಾರದ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದರೂ ಪೊಲೀಸರಿಗೆ ಅದು ವಿಷಯವಲ್ಲ. ದೂರು ನೀಡಲು ಹೋದರೆ ಸಿಡಿ ಕೊಡಿ ಎಂದು ಕೇಳುತ್ತಾರೆ. ಸಿಡಿ ಕೊಟ್ಟರೂ ಭಾಷಾಂತರಿಸಿ ಕೊಡಿ ಎನ್ನುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಪಿಎಫ್‌ಐ ಮೈಸೂರು ಜಿಲ್ಲಾಧ್ಯಕ್ಷ ಫಾರೂಕ್ ಮೈಸೂರು ಮಾತನಾಡಿದರು. ಪ್ರತಿಭಟನೆಯಲ್ಲಿ ಮುಸ್ತಫಾನ ಸಹೋದರ ತ್ವಾಹಾ ಇಬ್ರಾಹೀಂ, ಸಂಬಂಧಿ ಇರ್ಫಾನ್ ಪಾಲ್ಗೊಂಡಿದ್ದರು. ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಸ್ವಾಗತಿಸಿದರು. ಶರೀಫ್ ವಂದಿಸಿದರು. ಅಶ್ರಫ್ ಎ.ಕೆ.ಮೊಯ್ದಿನ್ ಕಾರ್ಯಕ್ರಮ ನಿರೂಪಿಸಿದರು.

ಸಂಘಪರಿವಾರದ ಪ್ರಚೋದನಕಾರಿ ಹೇಳಿಕೆ ಮತ್ತು ವ್ಯವಸ್ಥಿತ ಷಡ್ಯಂತ್ರದಿಂದಾಗಿ ಈ ಕೊಲೆ ನಡೆದಿರಬಹುದಾದ ಶಂಕೆ ಇದೆ. ಈ ಹಿಂದೆ ಜೈಲಿನಲ್ಲಿದ್ದುಕೊಂಡು ಮೂಡುಬಿದಿರೆಯ ಮುಸ್ಲಿಂ ನಾಯಕರ ಹತ್ಯೆಗೆ ಸಂಚು ರೂಪಿಸುತ್ತಿರುವಾಗ ಪೊಲೀಸರು ಬಂಧಿಸಿ ಕೇಸು ದಾಖಲಾಗಿದೆ. ಹಾಗಾಗಿ ಆರೋಪಿ ಕಿರಣ್ ಶೆಟ್ಟಿಯನ್ನು ಜೈಲಿನಲ್ಲಿ ಭೇಟಿಯಾಗುತ್ತಿದ್ದ ವ್ಯಕ್ತಿಗಳನ್ನು, ಆತನನ್ನು ಫೋನ್ ಸಂಭಾಷಣೆ ನಡೆಸುತ್ತಿದ್ದ ಜನರನ್ನು ವಿಚಾರಣೆಗೊಳಪಡಿಸಬೇಕು ಎಂದು ಪಿಎಫ್‌ಐ ಒತ್ತಾಯಿಸಿದೆ.

ಮುಸ್ತಫಾ ಕೊಲೆಗೆ ಜೈಲು ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ. ಹಾಗಾಗಿ ರಾಜ್ಯ ಸರಕಾರದ ಇದರ ಹೊಣೆ ಹೊತ್ತು 50 ಲಕ್ಷ ರೂ. ಪರಿಹಾರವನ್ನು ಮುಸ್ತಫಾ ಕುಟುಂಬಕ್ಕೆ ನೀಡಬೇಕು ಎಂದು ಪಿಎಫ್‌ಐ ಆಗ್ರಹಿಸಿತು.

ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಲೇ ಸಂಚಾರಕ್ಕೆ ತೊಂದರೆಯಾಯಿತು. ಈ ಸಂದರ್ಭ ಗುಪ್ತಚರ ಇಲಾಖೆಯ ಸಿಬ್ಬಂದಿಯ ವರ್ತನೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News