ಬಿ.ಸಿ.ರೋಡ್ ಗೆ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ

Update: 2016-12-05 14:59 GMT

ಬಂಟ್ವಾಳ, ಡಿ. 5: ಬೆಲ್ಟ್ ಆಪರೇಟ್ ಆಂಡ್ ಟ್ರಾನ್ಸ್‌ಫರ್ (ಬಿಒಟಿ) ಯೋಜನೆಯಡಿ ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಅತ್ಯಾಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಂದರ, ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ಜಮೀನಿನನ್ನು ಹಾಗೂ ಮೆಲ್ಕಾರ್ ಪೇಟೆ ಅಭಿವೃದ್ಧಿ ಕಾಮಗಾರಿಗಳನ್ನು ಸೋಮವಾರ ಸಂಜೆ ಅಧಿಕಾರಿಗಳು, ಜನಪ್ರತಿನಿಧಿಗಳ ದಂಡಿನೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಪುರಸಭೆಗೆ ಸೇರಿದ 47 ಸೆಂಟ್ಸ್ ಖಾಲಿ ಜಮೀನು ಇದ್ದು ಇಲ್ಲಿ ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಪುತ್ತೂರು ಸರಕಾರಿ ಬಸ್ ನಿಲ್ದಾಣ ನಿರ್ಮಿಸಿರುವ ಗುತ್ತಿಗೆ ಸಂಸ್ಥೆ ಬಿಒಟಿ ಯೋಜನೆಯಡಿ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಮುಂದೆ ಬಂದಿದೆ.

ಶೀಘ್ರದಲ್ಲೇ ಯೋಜನೆಯನ್ನು ತಯಾರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಬಸ್‌ನಿಲ್ದಾಣ ಪೂರ್ಣಗೊಂಡ ಬಳಿಕ ಮೂಡಬಿದ್ರೆ, ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎಂದು ಅವರು ಹೇಳಿದರು.

ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ 47 ಸೆಂಟ್ಸ್ ಜಮೀನಿಗೆ ತಾಗಿಕೊಂಡು10ಸೆಂಟ್ಸ್‌ಗೂ ಹೆಚ್ಚು ಪರಂಬೋಕು ಜಾಗವಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು. ಎಲ್ಲ ಜಾಗವನ್ನು ಸರ್ವೇ ನಡೆಸಿ ಗಡಿ ಗುರುತು ಮಾಡುವಂತೆ ಇದೇ ಸಂದರ್ಭದಲ್ಲಿ ಸಚಿವರು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆರಿಗೆ ಸೂಚಿಸಿದರು.

ಬಸ್ ನಿಲ್ದಾಣಕ್ಕೆ ಪ್ರಸ್ತುತ ಕಾಯ್ದಿರಿಸಿರುವ ಜಮೀನಿಗಿಂತ ಅನುಕೂಲತೆಯ ಸ್ಥಳ ಬಿ.ಸಿ.ರೋಡಿನಲ್ಲಿ ಬೇರೆ ಇಲ್ಲ. ಸದ್ರಿ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದ ವಾಣಿಜ್ಯ ಸಂಕಿರಣ ಸಹಿತ ಆಧುನಿಕ ಮಾದರಿಯ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣಕ್ಕೆ ನಕ್ಷೆ ರೂಪಿಸುವಂತೆ ಈ ಸಂದರ್ಭದಲ್ಲಿ ಹಾಜರಿದ್ದ ಗುತ್ತಿಗೆ ಸಂಸ್ಥೆಯ ಚೆಯರ್‌ಮೇನ್‌ ಡಾ.ಮುಹಮ್ಮದ್ ಇಬ್ರಾಹೀಂ ಪಾವೂರ್‌ರಿಗೆ ಸಚಿವ ರಮಾನಾಥ ರೈ ಸೂಚಿಸಿದರು.

ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದೆ ಮೆಲ್ಕಾರ್:

ಸರಕಾರದ ಅಪೆಂಡಿಕ್ಸ್ ಯೋಜನೆಯನ್ವಯ ಮೆಲ್ಕಾರ್‌ನಿಂದ ಮಾರ್ನಬೈಲ್‌ವರೆಗೆ ಚತುಷ್ಪಥ ಕಾಮಗಾರಿ ಭರದಿಂದ ಸಾಗಿದೆ. ಪಾದಚಾರಿಗಳಿಗೆ ನಡೆದಾಡಲು ಫುಟ್‌ಪಾತ್‌ ಹಾಗೂ ಝೀಬ್ರಾ ಕ್ರಾಸ್‌ಗಳನ್ನು ಅಳವಡಿಸುವುದಲ್ಲದೆ ರಸ್ತೆಯ ಎರಡೂ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗುವುದು. ರಸ್ತೆಯುದ್ದಕ್ಕೂ ದಾರಿ ದೀಪ ಅಳವಡಿಸುವ ಮೂಲಕ ಮುಂದಿನ ದಿನಗಳಲ್ಲಿ ಮೆಲ್ಕಾರ್ ಪೇಟೆಯ ರಸ್ತೆಗಳು ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.

ರಾಜ್ಯ ಹೆದ್ದಾರಿ ಯೋಜನೆಯಡಿ 1.75 ಕೋಟಿ ರೂ. ವೆಚ್ಚದಲ್ಲಿ ಮಾರ್ನಬೈಲ್‌ನಿಂದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಗಡಿಯಾದ ಸಜೀಪ ಮೂಡದವರೆಗಿನ ರಸ್ತೆಯನ್ನು ಮರು ಡಾಮರೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಸಿಆರ್‌ಎಫ್ ಯೋಜನೆಯಡಿ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಪಾಣೆಮಂಗಳೂರು ಪೇಟೆ ಮೂಲಕ ನಂದಾವರದವರೆಗೆ ಹಾಗೂ ಅಲ್ಲಿಂದ ಮಾರ್ನಬೈಲ್ ತನಕ ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೆಟ್ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಸಚಿವ ರೈ ವಿವರಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷಮುಹಮ್ಮದ್‌ನಂದರಬೆಟ್ಟು,ತಾಲೂಕುಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯೆ ಮಂಜುಳ ಮಾವೆ, ಪುರಸಭಾ ಸದಸ್ಯರಾದ ಜೆಸಿಂತ, ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಿಡಬ್ಯೂಡಿ ಎಂಜಿನಿಯರ್ ಉಮೇಶ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News