ಮುಂಡಗೋಡ ಹಬ್ಬಕ್ಕೆ ಶಾಸಕ ಹೆಬ್ಬಾರರಿಂದ ಚಾಲನೆ
ಮುಂಡಗೋಡ, ಡಿ.9: ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಮುಂಡಗೋಡ ಹಬ್ಬ(ಉತ್ಸವ)ಕ್ಕೆ ಇಂದು ಮುಂಜಾನೆ ಪರಿವೀಕ್ಷಣಾ ಮಂದಿರದ ಮುಖ್ಯದ್ವಾರದಲ್ಲಿ ಸುಮಾರು 10.30ಕ್ಕೆ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಡೊಳ್ಳು ಬಾರಿಸಿ ಕನ್ನಡ ಬಾವುಟ ಎತ್ತಿ ತೋರಿಸುವುದರ ಮೂಲಕ ಹಬ್ಬದ ಮೆರವಣೆಗಿಗೆ ಚಾಲನೆ ನೀಡಿದರು.
ಇಂದು ಮುಂಡಗೋಡ ಹಬ್ಬದ ಉತ್ಸವ ಅಂಗವಾಗಿ ನಗರವನ್ನು ತಳಿರುತೋರಣದಿಂದ ಶೃಂಗಾರ ಮಾಡಿ ರಸ್ತೆಯ ಮುಖ್ಯ ದ್ವಾರಗಳಿಗೆ ಮುಂಡಗೋಡ ಹಬ್ಬಕ್ಕೆ ಸ್ವಾಗತ ಎನ್ನುವ ಕಟೌಟ್ ಗಳನ್ನು ಹಾಕಲಾಗಿತ್ತು. ಮುಂಡಗೋಡ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ಎದ್ದು ಕಾಣುತ್ತಿತ್ತು.
ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಶಾಸಕ ಶಿವರಾಮ ಹೆಬ್ಬಾರರು ಕ್ರೀಡಾಂಗಣ ತಲುಪುವರೆಗೂ ಶಾಸಕ ಇದ್ದರು. ಮುಂಡಗೋಡ ಹಬ್ಬದ ಮೆರವಣಿಗೆಯನ್ನು ಇಕ್ಕೆಲಗಳಲ್ಲಿ ಜನರು ನೋಡಿ ಖುಷಿ ಪಡುತ್ತಿರುವುದು ಕಂಡು ಬಂದಿತು
ಮೆರವಣಿಗೆಯಲ್ಲಿ ಕುಂಭಗಳನ್ನು ಹೊತ್ತ ಮಹಿಳೆಯರು, ಮಹಿಳೆಯರ ಡೊಳ್ಳು ಕುಣಿತ, ಬಂಟ್ವಾಳದ ಚಿಲಿಪಿಲಿ ನೃತ್ಯ ಹಾಗೂ ವಿವಿಧ ಪ್ರಾಣಿಗಳ ಮುಖವಾಡಗಳು ಧರಿಸಿದ ನೃತ್ಯ ನೋಡುಗರ ಮನತಣಿಸಿತು. ಮೆರವಣಿಗೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸದಸ್ಯ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ್, ಜಯಮ್ಮ ಹಿರಳ್ಳಿ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಪಂಚಾಕ್ಷರಿ ಸಂಗೂರಮಠ, ಬಾಬಾ ಬೆಂಡಿಗೇರ,ಪಪಂ ಅಧ್ಯಕ್ಷ ರಫೀಕ ಇನಾಮದಾರ, ಎಪಿಎಮ್ಸಿ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ರಾಮಣ್ಣ ಪಾಲೇಕರ, ಸೇರಿದಂತೆ ಪ.ಪಂ ಸದಸ್ಯರು ತಾ.ಪಂ ಸದಸ್ಯರು, ಅಲೆ ಬೆಂಡಿಗೇರಿ ಬಹುತೇಕ ಕಾಂಗ್ರೆಸ್ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಪಟ್ಟಣದ ಶಾಲಾ ಮಕ್ಕಳು ಸೇರಿದಂತೆ ತಾಲೂಕಿನ ಗ್ರಾಮಂತರ ಶಾಲಾ ಮಕ್ಕಳು ಭಾಗವಹಿಸಿದ್ದರು
ಇಂದು ಸಂಜೆ ತಾಲೂಕ ಕ್ರೀಡಾಂಗಣದಲ್ಲಿ ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಭಾ ಕಾರ್ಯಕ್ರಮ 7.30 ಕ್ಕೆ ನಡೆಯಲಿದೆ ರಾತ್ರಿ 9ರಿಂದ 12 ಗಂಟೆಯವರೆಗೆ ಸಿಂಚನಾ ದಿಕ್ಷೀತ ಕಲಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ