ಡಿ.17ರಿಂದ ಎಂಪಿಎಲ್ ಕ್ರಿಕೆಟ್ ಪಂದ್ಯಾಟ: ಅಝರುದ್ದೀನ್‌ರಿಂದ ಉದ್ಘಾಟನೆ

Update: 2016-12-09 18:35 GMT

ಮಂಗಳೂರು, ಡಿ.9: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ಧೀನ್ ಡಿ.17ರಂದು ಈ ಬಾರಿಯ ಅಲ್ ಮುಝೈನ್ -ವೈಟ್‌ಸ್ಟೋನ್ -ಎಂಪಿಎಲ್ ಆವೃತ್ತಿಯ 20-20 ಕ್ರಿಕೆಟ್ ಪಂದ್ಯಾಟವನ್ನು ನವಮಂಗಳೂರು ಬಂದರು ಮಂಡಳಿಯ ಬಳಿಯ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಮಂಗಳೂರು ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿಯ ಅಧ್ಯಕ್ಷ ಸಿರಾಜುದ್ದೀನ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

 ಹಸಿರು ಹುಲ್ಲಿನ ಅಸ್ಟ್ರೋಟಫ್ ಮೈದಾನದಲ್ಲಿ ಡಿ.17ರಿಂದ 30ರವೆಗೆ ಒಟ್ಟು 14 ದಿನಗಳ ಕಾಲ 12 ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಲೀಗ್ ಹಂತದಲ್ಲಿ 30 ಪಂದ್ಯಗಳು, ನಂತರ ಎಲಿಮಿನೇಟರ್, ನಾಕೌಟ್ ಹಂತಗಳಲ್ಲಿ 5 ಪಂದ್ಯಗಳು ನಡೆಯಲಿವೆ. ಡಿ.17ರಂದು ಸಂಜೆ 4:30ಕ್ಕೆ ಉದ್ಘಾಟನೆ ನಡೆಯಲಿದ್ದು, ಅಧಿಕೃತ ಪಂದ್ಯಗಳು ಡಿ.18ರಿಂದ ನಡೆಯಲಿದೆ. ಸಮಾರಂಭದಲ್ಲಿ ಉದ್ಘಾಟಕ ಮುಹಮ್ಮದ್ ಅಝುದ್ಧೀನ್ ಜೊತೆ ಅಲ್‌ಮುಝೈನ್ ಸಂಸ್ಥೆಯ ಉದ್ಯಮಿ ಝಕಾರಿಯಾ ಜೋಕಟ್ಟೆ, ವೈಟ್‌ಸ್ಟೋನ್ ಸಂಸ್ಥೆಯ ಉದ್ಯಮಿ ಜನಾಬ್ ಶರೀಫ್ ಬಿ.ಎಂ,ರಿಯಲ್ ಟೆಕ್ ಕಂಪೆನಿಯ ಉದ್ಯಮಿ ಇಸ್ಮಾಯೀಲ್ ಭಾಗವಹಿಸಲಿದ್ದಾರೆ ಎಂದರು.

  *ಭಾಗವಹಿಸುವ ತಂಡಗಳು: ಈ ಬಾರಿಯ ಪಂದ್ಯದಲ್ಲಿ ರೆಡ್ ಹಾಕ್ಸ್ ಕುಡ್ಲ, ಟೀಮ್ ಎಲಿಗೆಂಟ್ ಮೂಡುಬಿದಿರೆ, ಕಂಕನಾಡಿ ನೈಟ್ ರೈಡರ್ಸ್‌, ಕರಾವಳಿ ವಾರಿಯರ್ಸ್‌ ಪಣಂಬೂರು, ಕಾರ್ಕಳ ಗ್ಲೇಡಿಯೇಟರ್ಸ್‌, ಪ್ರೆಸಿಡೆಂಟ್ಸ್ ಸಿಕ್ಸರ್ಸ್‌ ಕುಂದಾಪುರ, ಮೇಸ್ಟ್ರೋ ಟೈಟಾನ್ಸ್ , ಸ್ಪಾರ್ಕ್ ಎವೆಂಜರ್ಸ್‌ ಬೊಳಾರ, ಕೋಸ್ಟಲ್ ಡೈಜೆಸ್ಟ್, ಸುರತ್ಕಲ್ ಸ್ಟ್ರೈಕರ್ಸ್‌, ಯುನೈಟೆಡ್ ಉಳ್ಳಾಲ, ಉಡುಪಿ ಟೈಗರ್ಸ್‌ ಭಾಗವಹಿಸಲಿವೆ. ಐಪಿಲ್ ಆಟಗಾರರಾದ ಕೆ.ಸಿ.ಕಾರ್ಯಪ್ಪ, ಶಿವಿಲ್ ಕೌಶಿಕ್, ಬಿ.ಅಖಿಲೇಶ್, ಅಪ್ಪಣ್ಣ ಮತ್ತು 38 ಮಂದಿ ಕೆಪಿಎಲ್ ಆಟಗಾರರು ವಿವಿಧ ತಂಡಗಳಲ್ಲಿ ಸೇರಿ ಆಡಲಿದ್ದಾರೆ.

*ಆಕರ್ಷಕ ಉದ್ಘಾಟನಾ ಸಮಾರಂಭ: ಡಿ.17ರಂದು ಸಂಜೆ 4:30 ಗಂಟೆಗೆ ಅರ್ಜುನ್ ಕಾಪಿಕಾಡ್ ನೇತೃತ್ವದ ಚಲನಚಿತ್ರ ತಾರೆಯರ ತಂಡ ಹಾಗೂ ಎಂಪಿಎಲ್ ಆಯೋಜಕರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಲೇಸರ್ ಶೋ, ಟಾಲ್‌ಮೆನ್, ಸುಡುಮದ್ದು ಪ್ರದರ್ಶನ, ರಶಿಯನ್ ಅಗ್ನಿ ನೃತ್ಯ, ಡ್ರಾಗ್ಯನ್ ನೃತ್ಯ ಪ್ರದರ್ಶನಗೊಳ್ಳಲಿವೆ ಎಂದು ಸಿರಾಜುದ್ಧೀನ್ ತಿಳಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ತೀರ್ಪುಗಾರರು ಈ ಸಂದರ್ಭ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಸಂಚಾಲಕರಾದ ಇಮ್ತಿಯಾಝ್, ಸಂಯೋಜಕ ಗೌತಮ್ ಶೆಟ್ಟಿ, ಉದ್ಘಾಟನಾ ಕಾರ್ಯಕ್ರಮದ ಸಂಘಟನಾ ಸಮಿತಿಯ ಸದಸ್ಯ ಅರ್ಜುನ್ ಕಾಪಿಕಾಡ್ ಸಚಿನ್, ಕಾರ್ಯಕ್ರಮದ ಪ್ರಾಯೋಜಕರಾದ ವೈಟ್‌ಸ್ಟೋನ್ ಸಂಸ್ಥೆಯ ಉದ್ಯಮಿ ಶರೀಫ್‌ರ ಪುತ್ರ ಶೋಯಿಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News