ಆಕ್ರಮ ನೋಟು ಸಾಗಾಟ:ಬಂಧಿತರಿಗೆ ಜಾಮೀನು
ಪುತ್ತೂರು,ಡಿ.10 : ಪುತ್ತೂರು ನಗರ ಪೊಲೀಸರು ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದ ಅಕ್ರಮ ನೋಟು ಸಾಗಾಟ ಪ್ರಕರಣದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿದೆ.
ಕಳೆದ ಬುಧವಾರ ಸಂಜೆ ಪುತ್ತೂರು ನಗರ ಪೊಲೀಸರು ಮುಕ್ರಂಪಾಡಿಯಲ್ಲಿ ಕಾರ್ಯಾಚರಣೆ ನಡೆಸಿ ದಂಧೆ ನಡೆಸಲು ರಿಜ್ಡ್ ಕಾರಿನಲ್ಲಿ ಬಂದಿದ್ದ ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ನಿವಾಸಿ ಜಾಫರ್ ಶರೀಫ್, ಮಾಣಿಮಜಲು ನಿವಾಸಿ ನಝೀರ್ ಮತ್ತು ಕೆಸಿ ರೋಡ್ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರನ್ನು ಬಂಧಿಸಿದ್ದರು. ಬಂಧಿತರ ವಶದಲ್ಲಿದ್ದ ರೂ. 2 ಸಾವಿರ ಮುಖಬೆಲೆಯ ಹೊಸನೋಟುಗಳು ಸೇರಿದಂತೆ ಒಟ್ಟು ರೂ18.8 ಲಕ್ಷ ನಗದು ಹಣ , ದಂಧೆಗೆ ಬಳಸಿದ ರಿಜ್ಡ್ ಕಾರು,ಮತ್ತು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬಳಿಕ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಆರೋಪಿಗಳಿಗೆ ಇದೀಗ ಜಾಮೀನು ನೀಡಿದೆ.
ಆರೋಪಿಗಳ ಪರವಾಗಿ ವಕೀಲರಾದ ಕೃಷ್ಣಪ್ರಸಾದ್ ರೈ,ಕುಮಾರ್ನಾಥ್ ಎಸ್ ಮತ್ತು ರಾಕೇಶ್ ಮಸ್ಕರೇನ್ಹಸ್ ವಾದಿಸಿದ್ದರು.