ಡಿ.31ರಂದು ಸಾಂಪ್ರದಾಯಿಕ ಕಂಬಳ, ಮುಲ್ಕಿ ಸೀಮೆ ಉತ್ಸವ
ಮುಲ್ಕಿ, ಡಿ.16: ಕಂಬಳಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಡಿ.31ರಂದು ನಡೆಯಬೇಕಿದ್ದ ಮುಲ್ಕಿ ಸೀಮೆಯ ಅರಸು ಕಂಬಳವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಜೊತೆಗೆ ‘ಮುಲ್ಕಿ ಸೀಮೆ ಉತ್ಸವ’ ಆಚರಿಸುವ ಬಗ್ಗೆ ಕಂಬಳ ಸಮಿತಿ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಯಿತು.
ಶುಕ್ರವಾರ ಮುಲ್ಕಿ ಸೀಮೆಯ ಅರಮನೆಯಲ್ಲಿ ಅರಸರಾದ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಲ್ಕಿ ಅರಸು ಕಂಬಳವು ದೇವರ ಕಂಬಳವಾಗಿರುವ ಕಾರಣ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಅದರೊಂದಿಗೆ ‘ಮುಲ್ಕಿ ಸೀಮೆ ಉತ್ಸವ’ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಲ್ಕಿ ಸೀಮೆಗೆ ಒಳಪಡುವ ಹೋಬಳಿಯ 32 ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಸಹಿತ ಜನಪದ, ಸಾಂಪ್ರದಾಯಿಕ ಕ್ರೀಡೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ಕಂಬಳ ಸಮಿತಿಯ ಪದಾಧಿಕಾರಿಗಳಾದ ನವೀನ್ ಶೆಟ್ಟಿ ಎಡ್ಮೆಮಾರ್, ಮನ್ಸೂರ್, ಶಾಹುಲ್ ಹಮೀದ್, ಶಶಿಂದ್ರ ಸಾಲ್ಯಾನ್, ಶ್ಯಾಂ ಪಡುಪಣಂಬೂರು ಮತ್ತಿತರರಿದ್ದರು.