ಡಿ.24: ತುಳುಚಿತ್ರ ನಿರ್ಮಾಪಕ ಸಂಘದ ಚುನಾವಣೆ
ಮಂಗಳೂರು, ಡಿ.17: ತುಳುಚಿತ್ರ ನಿರ್ಮಾಪಕರ ಸಂಘದ ಪ್ರಥಮ ಚುನಾವಣೆ ಡಿ.24ರಂದು ನಗರದ ಡಾನ್ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ ಕೆ.ಎಸ್.ಎನ್.ರಾಜೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
18 ಸ್ಥಾನಗಳಿಗೆ 28 ಮಂದಿ ಸ್ಪರ್ಧಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಟಿಲೇಶ್ವರಿ ಕಂಬೈನ್ಸ್ನ ಕೆ.ದೇವ್ದಾಸ್ ಕುಮಾರ್ ಹಾಗೂ ಪ್ರಾರ್ಥನ ಕ್ರಿಯೇಶನ್ಸ್ನ ಆರ್. ಧನರಾಜ್ ಸ್ಪರ್ಧಿಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದೇವದಾಸ್ ಕಾಪಿಕಾಡ್, ಎನ್ನಾರ್ ಕೆ. ವಿಶ್ವನಾಥ್, ಪ್ರವೀಣ್(ಪಮ್ಮಿ), ರಾಜ್ಶೇಖರ್ ಕೋಟ್ಯಾನ್ ಹಾಗೂ ಶಿವಧ್ವಜ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು, ಜೊತೆಕಾರ್ಯದರ್ಶಿ ಸ್ಥಾನಕ್ಕೆ 4 ಮಂದಿ, ಖಜಾಂಚಿ ಸ್ಥಾನಕ್ಕೆ ಇಬ್ಬರು, ಹಾಗೂ ಸಮಿತಿ ಸದಸ್ಯರ ಸ್ಥಾನಕ್ಕೆ 13 ಮಂದಿ ಸ್ಪರ್ಧಿಸುತ್ತಿದ್ದಾರೆ ಎಂದವರು ವಿವರಿಸಿದರು.
ಚುನಾವಣೆ ಘೋಷಣೆಯಾದ ಬಳಿಕ ತುಳುಚಿತ್ರ ನಿರ್ಮಾಪಕರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಪಕರು ಸಂಘದ ಸದಸ್ಯರಾಗಲು ಮುಂದೆ ಬಂದಿದ್ದಾರೆ. ಇದು ಮುಂದಿನ ಬೆಳವಣಿಗೆಗೆ ಪೂರಕವಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಎ.ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಸುದೇಶ್ ಭಂಡಾರಿ, ಸಚಿನ್ ಎ.ಎಸ್.ಉಪಸ್ಥಿತರಿದ್ದರು.