ಪಡುಬಿದ್ರಿಯಲ್ಲಿ ಆಕ್ಯೂಪ್ರಶರ್ ಚಿಕಿತ್ಸಾ ಶಿಬಿರ

Update: 2016-12-18 10:10 GMT

ಪಡುಬಿದ್ರಿ, ಡಿ.18: ಪ್ರಾಕೃತಿಕ ಚಿಕಿತ್ಸೆಯ ಭಾಗವಾಗಿರುವ ಆಕ್ಯೂಪ್ರಶರ್ ಚಿಕಿತ್ಸಾ ಪದ್ಧತಿಯಿಂದ ಯಾವುದೇ ಔಷದೋಪಚಾರಗಳಿಲ್ಲದೆ ವ್ಯಾದಿಗಳನ್ನು ನಿವಾರಿಸಬಹುದು. ಈ ಚಿಕಿತ್ಸಾ ವಿಧಾನವನ್ನು ಋಷಿಮುನಿಗಳು ಕಂಡುಹಿಡಿದಿರುವುದಾಗಿ ರಾಜಸ್ತಾನದ ಡಾ. ರಾಮ ಮನೋಹರ ಲೋಹಿಯಾ ಆರೋಗ್ಯ ಸಂಸ್ಥಾನದ ಡಾ.ಪ್ರಕಾಶ್ ಜಾಕರ್ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಗೊಡ್ಡ ಸಮಾಜ ಸೇವಾ ಸಂಘ ಸಂಯುಕ್ತವಾಗಿ ಪಡುಬಿದ್ರಿಯ ಕಲ್ಲಟ್ಟೆಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆರಂಭವಾದ ಒಂದು ವಾರದ ಕಾಲ ಆಯೋಜಿಸಿದ್ದ ಅಕ್ಯೂಪ್ರೆಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಅಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿ ಪ್ರಾಕೃತಿಕ ಚಿಕಿತ್ಸೆಯ ಒಂದು ಭಾಗವಾಗಿದೆ. ಈ ಚಿಕಿತ್ಸಾ ಪದ್ಧತಿಯಿಂದ ದೇಹದ ಅತಿಭಾರ, ಮಧುಮೇಹ, ಅರ್ಧ ತಲೆನೋವು, ಕೀಲು ನೋವು, ಸಂಧಿವಾತ, ಪಿತ್ತವಾತ, ರಕ್ತದೊತ್ತಡ, ಬೆನ್ನುಹುರಿ, ಮೊಣಕಾಲು ನೋವು, ಅಜೀರ್ಣ, ಮಲಬದ್ಧತೆ ಮತ್ತಿತರ ಕಾಯಿಲೆಗಳನ್ನು ನಿವಾರಣೆ ಮಾಡಬಹುದು. ಈ ಚಿಕಿತ್ಸೆಯಿಂದ ಯಾವುದೇ ತೊಂದರೆಗಳಿಲ್ಲ ಎಂದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಕಲ್ಲಟ್ಟೆ ಶ್ರೀಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ ಬಾಲ್, ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರ ಸೇವೆ ನೀಡುತ್ತಿರುವ ರೋಟರಿ ಕ್ಲಬ್‌ನ ಸೇವೆ ಶ್ಲಾಘನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಶುಭಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಮಕೃಷ್ಣ ಆಚಾರ್ಯ ಚಾಲನೆ ನೀಡಿದರು. ದಕ ಜಿಲ್ಲಾ ಗೊಡ್ಡ (ದಲಿತ) ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಮಾಜಿ ಅಧ್ಯಕ್ಷ ಸಂಜೀವ ಮಾಸ್ಟರ್, ಡಾ.ಟಿ.ಕೆ.ಚೌದರಿ, ಗ್ರಾಮ ಪಂಚಾಯ್ತಿ ಸದಸ್ಯ ಬುಡಾನ್ ಸಾಹೇಬ್, ರೋಟರಿ ಕ್ಲಬ್ ಕಾರ್ಯದರ್ಶಿ ಕರುಣಾಕರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News