ಅನುಕೂಲಗಳ ಲಾಭ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಿ: ಪೇಜಾವರ ಶ್ರೀ
ಉಡುಪಿ, ಆ.11: ಇಂದು ಶಿಕ್ಷಣ ವಲಯದಲ್ಲಿ ಸಾಕಷ್ಟು ಅನುಕೂಲಗಳನ್ನು ಒದಗಿಸಲಾಗಿದೆ. ಅದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕ ವಾಗಿ ಇನ್ನಷ್ಟು ಎತ್ತರಕ್ಕೆ ಏರಬೇಕು ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರೋಟರಿ ಉಡುಪಿ ಮತ್ತು ಪೆರ್ಡೂರು ಕ್ಲಬ್ ಹಾಗೂ ವಲಯ 4ರ ಎಲ್ಲ ಕ್ಲಬ್ಗಳ ಸಹಕಾರದೊಂದಿಗೆ ಶುಕ್ರವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ರಾಜಾಂಗಣದಲ್ಲಿ ಆಯೋಜಿಸಲಾದ ಕಲಿಕಾ ಕೌಶಲಾಭಿವೃದ್ಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿಯು ಪ್ರಮುಖ ಘಟ್ಟವಾಗಿದೆ. ಜೀವನದಲ್ಲಿ ಅಂಕ ಮತ್ತು ಪ್ರಮಾಣಪತ್ರವೇ ಮುಖ್ಯ ಅಲ್ಲ. ಆದರೆ ಇಂದು ಇದುವೇ ಅನಿವಾರ್ಯವಾಗಿದೆ. ಪರೀಕ್ಷೆ ದಿನ ಹೆಚ್ಚಿನ ಒತ್ತಡ ತೆಗೆದುಕೊಳ್ಳದೆ ಅಂದಿನ ಪಾಠ ವನ್ನು ಅದೇ ದಿನ ಮನನ ಮಾಡುವ ಪರಿಪಾಠವನ್ನು ವಿದ್ಯಾರ್ಥಿಗಳು ಬೆಳೆಸಿ ಕೊಳ್ಳಬೇಕು ಎಂದರು.
ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರ ಮಹಾ ಪ್ರಬಂಧಕ ಸತೀಶ್ ಕಾಮತ್, ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಉಡುಪಿ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ವಲಯ 4ರ ಸಹಾಯಕ ಗವರ್ನರ್ ಬಾಲಕೃಷ್ಣ ಮುದ್ದೋಡಿ ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ಗಳ ಪದಾಧಿಕಾರಿಗಳಾದ ಪ್ರಭಾಕರ ಮಲ್ಯ, ಕೆ.ಟಿ.ನಾಯಕ್, ಗೀತಾ ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು. ಚಂದ್ರ ನಾಯ್ಕಿ ವಂದಿಸಿದರು. ರಾಜೇಶ್ ಭಟ್ ಪಣಿ ಯಾಡಿ ಕಾರ್ಯಕ್ರಮ ನಿರೂಪಿಸಿದರು.