ಪುಂಡರೀಕಾಕ್ಷ ಉಪಾಧ್ಯಾಯರಿಗೆ ಸಾಮಗ ಪ್ರಶಸ್ತಿ ಪ್ರದಾನ
ಉಡುಪಿ, ಆ.11: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ತುಳುಕೂಟದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಪುಂಡರೀಕಾಕ್ಷ ಉಪಾಧ್ಯಾಯರಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಯನ್ನು ಶುಕ್ರವಾರ ರಾಜಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಲ್ಪೆ ರಾಮದಾಸ ಸಾಮಗರು ಯಕ್ಷಗಾನಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಶೇಣಿ ಜೊತೆ ಉತ್ತಮ ಸೇವೆ ಸಲ್ಲಿಸಿ ಯಕ್ಷಗಾನದ ಗೌರವವನ್ನು ಹೆಚ್ಚಿಸಿದ್ದಾರೆ. ಮಾತಿನಲ್ಲಿ ಪರಿಶುದ್ಧ ವ್ಯಾಕರಣ ಅವರ ವೈಶಿಷ್ಟವಾಗಿದೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್ ಹೆಗ್ಡೆ ಬೈಲೂರು, ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ, ತುಳುಕೂಟದ ಗೌರವ ಅಧ್ಯಕ್ಷ ಭಾಸ್ಕರಾನಂದ ಕುಮಾರ್ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿ ಯೂರು ವಂದಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಕೋಟಿ ಚೆನ್ನಯ’ ತುಳು ುಕ್ಷಗಾನ ಪ್ರದರ್ಶನ ನಡೆಯಿತು.