‘ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತದ ಶಾಲೆಗಳಿಗೆ ಅನುದಾನ ರದ್ದು ಸರಿಯಾದ ಕ್ರಮ’
ಮಂಗಳೂರು, ಆ.12: ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತಕ್ಕೊಳಪಟ್ಟ ಎರಡು ಶಾಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ದೇವಸ್ಥಾನದಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ ಸಮರ್ಥಿಸಿದೆ.
ನಗರದ ಸರ್ಕಿಟ್ ಹೌಸ್ನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪರಿಷತ್ನ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಮತ್ತು ಜಗನ್ನಿವಾಸ್ ರಾವ್, ರಾಜ್ಯದ ಅನೇಕ ಖಾಸಗಿ ಶಾಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ದೇವಸ್ಥಾನಗಳಿಂದ ಕಾನೂನುಬಾಹಿರವಾಗಿ ಅನುದಾನ ನೀಡಲಾಗುತ್ತಿತ್ತು. ಅದನ್ನೆಲ್ಲಾ ನಿಲ್ಲಿಸಲಾಗುತ್ತಿದೆ. ಕಳೆದ ವರ್ಷವೇ ಕಡಬದ ಸರಸ್ವತಿ ಶಾಲೆಗೆ ನೀಡಲಾಗುತ್ತಿದ್ದ ಅನುದಾನವನ್ನು ನಿಲ್ಲಿಸಲಾಗಿತ್ತು. ಆ ವೇಳೆ ಇಲ್ಲದ ವಿರೋಧ-ಪ್ರತಿಭಟನೆ ಈಗ ಯಾಕೆ ಆಗುತ್ತಿದೆ? ಪರಿಷತ್ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಗುರಿಯಾಗಿಸಿಕೊಂಡು ಇಂತಹ ಕ್ರಮ ಹಠಾತ್ ಜರಗಿಸಿದ್ದಲ್ಲ. ವರ್ಷದ ಹಿಂದೆಯೇ ಈ ಪ್ರಕ್ರಿಯೆ ಆರಂಭಿಸಿದ್ದು, ಅದೀಗ ಅನುಷ್ಠಾನಕ್ಕೆ ಬರುತ್ತಿದೆ ಎಂದರು.
ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಸೆ.19ರಲ್ಲಿ ಸ್ಪಷ್ಟ ನೀತಿ ರೂಪಿಸಿದೆ. ಆದರೆ ಬಿಜೆಪಿ ಸರಕಾರ ಈ ನೀತಿಯನ್ನೂ ಬದಲಾಯಿಸದೆ ಅಧಿಕಾರಿಗಳ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೊಳಿಸಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲಾಗುವುದಲ್ಲದೆ, ಅವರಿಂದಲೇ ಹಣ ವಸೂಲು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ನ ಜಿಲ್ಲಾ ಸಮಿತಿ ಸದಸ್ಯರಾದ ಜಗನ್ ಚೌಟ, ಮಿಥುನ್ ಸುವರ್ಣ ಉಪಸ್ಥಿತರಿದ್ದರು.