ಇಂದ್ರಾಳಿ: ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ
ಮಣಿಪಾಲ, ಆ.12: ತಾಯಿಯ ಅನಾರೋಗ್ಯದಿಂದ ಬೇಸತ್ತು, ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಪತ್ರ ಬರೆದಿಟ್ಟು ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಇಂದ್ರಾಳಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನಿಟ್ಟೂರಿನ ಪ್ರತೀಕ್ ಕುಮಾರ್ (22) ಎಂದು ಗುರುತಿಸಲಾಗಿದೆ. ಎಂದಿನಂತೆ ನಿನ್ನೆ ಸಂಜೆ 6:30ಕ್ಕೆ ಕೆಲಸ ಮುಗಿಸಿ ಮನೆಗೆ ಬಂದ ಪ್ರತೀಕ್ ಆ ಬಳಿಕ ನಾಪತ್ತೆಯಾಗಿದ್ದ. ಮನೆಯವರು ಹುಡುಕಾಡಿದ ಬಳಿಕ ಆತನ ಮೃತದೇಹ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪದ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ರೈಲಿನಡಿಗೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ ಆತ ಪ್ರೇಮವೈಫಲ್ಯದಿಂದ ಮನನೊಂದು ಮೃತಪಟ್ಟಿದ್ದಾನೆ ಎಂದು ಕೆಲವು ಮೂಲಗಳು ತಿಳಿಸಿವೆ. ತಾನು ಪ್ರೀತಿಸಿದ ಯುವತಿ ಕೋಪಿಸಿಕೊಂಡ ಕಾರಣ ಮನನೊಂದು ಈತ ಈ ಕೃತ್ಯ ಎಸಗಿದ್ದಾನೆ ಎಂದೂ ಹೇಳಲಾಗುತ್ತಿದೆ. ನಿನ್ನೆ ಸಂಜೆ 6:30ರಿಂದ ಮಧ್ಯರಾತ್ರಿ 2 ಗಂಟೆ ನಡುವೆ ಈತ ಚಲಿಸುತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.