ಗುರುವಾಯನಕೆರೆ: ಎಸ್ ಡಿ ಪಿ ಐ ವತಿಯಿಂದ ಬಸ್ ನಿಲ್ದಾಣ ಲೋಕಾರ್ಪಣೆ
ಬೆಳ್ತಂಗಡಿ, ಆ. 14: ಎಸ್ ಡಿ ಪಿ ಐ ನ್ಯಾಯ ಮತ್ತು ಸಮಾನತೆಯ ಪಕ್ಷ, ನಮ್ಮ ಪಕ್ಷ ರಾಜ್ಯದ ಮೂರನೇ ಅತ್ಯಂತ ಪ್ರಮುಖ ಪಕ್ಷವಾಗಿ ಮೂಡಿಬರುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಭವಿಷ್ಯದ ಆಡಳಿತಗಾರರನ್ನು ನಿರ್ಧರಿಸುವ ಪಕ್ಷವಾಗಿ ಹೊರಹೊಮ್ಮಲಿದೆ. ನಮ್ಮ ಪಕ್ಷಕ್ಕೆ ಜಾತಿ, ಧರ್ಮ ಎಂಬ ತಾರತಮ್ಯವಿಲ್ಲ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದರು.
ಗುರುವಾಯನಕೆರೆ ರಾಷ್ಟ್ರೀಯ ಹೆದ್ದಾರಿ ಬಳಿ ಎಸ್ ಡಿ ಪಿ ಐ ವತಿಯಿಂದ ನೂತನವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ದೇವನೀರು ಪುಟ್ನಂಜಯ್ಯ, ರಾಜ್ಯದಲ್ಲಿ ರಾಜಕೀಯ ಹದಗೆಟ್ಟಿದೆ, ರಾಜಕೀಯ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ವ್ಯಾಪಾರ ದಂಧೆಗಳಾಗಿವೆ. ದಲಿತರ, ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿದೆ. ಅಧಿಕಾರ ಬಲಾಢ್ಯರ ಕೈಯ್ಯಲಿದ್ದು ಕೋಮುವಾದಿ, ದೇಶದ್ರೋಹಿಗಳು ಜಿಲ್ಲೆಯಲ್ಲಿ ಮೆರೆಯುತ್ತಿದ್ದಾರೆ. ಆದ್ದರಿಂದ ಎಸ್ ಡಿ ಪಿ ಐ ಗೆ ಬೆಂಬಲಿಸಿದರೆ ಪರ್ಯಾಯ ಪರಿಶುದ್ಧ ರಾಜಕೀಯ ಬರಲಿದೆ ಎಂದು ತಿಳಿಸಿದರು.
ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಂತರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಅಬ್ದುಲ್ ಲತೀಫ್ ಪುತ್ತೂರು, ರಿಯಾಝ್ ಫರಂಗಿಫೇಟೆ, ಅಬ್ರಹಾರ್ ಪಟೇಲ್, ಅಕ್ರಂ ಹಸನ್, ಅತಾವುಲ್ಲಾ ಜೋಕಟ್ಟೆ, ನವಾಝ್ ಪೆರಾಲ್ದಕಟ್ಟೆ, ನವಾಝ್ ಉಳ್ಳಾಲ, ರಿಯಾಝ್ ಮದ್ದಡ್ಕ, ಇಕ್ಬಾಲ್ ಬಂಗೇರಕಟ್ಟೆ, ಶುಕೂರ್ ಕುಪ್ಪೆಟ್ಟಿ, ಮುಸ್ತಫಾ ಜಿ. ಗುರುವಾಯನಕೆರೆ, ಸುನ್ನತ್ ಕೆರೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ, ಅಬ್ದುಲ್ ರಹ್ಮಾನ್ ಗುರುವಾಯನಕೆರೆ, ಅಶ್ರಫ್ ಗುರುವಾಯನಕೆರೆ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಸಾರ್ ಕಾರ್ಯಕ್ರಮ ನಿರೂಪಿಸಿದರು.