ಸಚ್ಚಿದಾನಂದ ಹೆಗ್ಡೆಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ
ಉಡುಪಿ, ಆ.15: ಉಡುಪಿ ತುಳುಕೂಟದ ವತಿಯಿಂದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ತುಳು ಕಾದಂಬರಿ ‘ಬಾಲು ಮಾಡೆತಿ’ ಕೃತಿಕಾರ ಸಚ್ಚಿದಾನಂದ ಹೆಗ್ಡೆ ಅವರಿಗೆ ಮಂಗಳವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ಕೃತಿ ಬಿಡುಗಡೆಗೊಳಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ತುಳು ಮಾತನಾಡುವವರು ಬುದ್ದಿವಂತರು ಎಂಬುದಾಗಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಫಲಿತಾಂಶದಿಂದ ಸಾಬೀತಾಗಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು, ಶ್ರೇಷ್ಠ ಹಾಗೂ ಸಮೃದ್ಧ ಭಾಷೆಯಾಗಿದೆ ಎಂದು ಹೇಳಿದರು.
ಮಂಗಳೂರು ಸೈಂಟ್ ಅಲೋಷಿಯಸ್ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ಕೃತಿ ಪರಿಚಯ ಮಾಡಿ, ತುಳುನಾಡಿನ ಚರಿತ್ರೆ ಯನ್ನು ಇಲ್ಲಿನ ಕೃಷಿಕರು ಹಾಗೂ ಮೂಲನಿವಾಸಿಗಳು ಕಟ್ಟಿದ್ದಾರೆಯೇ ಹೊರತು ರಾಜಮಹಾರಾಜರಲ್ಲ. ಹಾಗಾಗಿ ತುಳುನಾಡಿನ ಚರಿತ್ರೆಯ ಮರು ಅಧ್ಯಯನ ನಡೆಯಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಪುರುಷೋತ್ತಮ ಶೆಟ್ಟಿ ಭಾಗವಹಿಸಿದ್ದರು. ತುಳುಕೂಟದ ಗೌರವಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಕೋಶಾಧಿಕಾರಿ ಎಂ.ಜಿ.ಚೈತನ್ಯ, ಹರಿಕಾದಾಸ ಶ್ರೀಶದಾಸ ಉಪಸ್ಥಿತರಿದ್ದರು.
ಪಣಿಯಾಡಿ ಸಮಿತಿಯ ಸಂಚಾಲಕ ಪ್ರಕಾಶ್ ಸುವರ್ಣ ಸ್ವಾಗತಿಸಿದರು. ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಲೇಖಕರ ಪರಿಚಯ ಮಾಡಿದರು. ಯಶೋಧ ಕೇಶವ್ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿ ದರು. ಇದಕ್ಕೂ ಮುನ್ನ ರುಕ್ಮಿಣಿ ಹಂದೆ ಅವರ ಶಿಷ್ಯೆ ವಸುಪ್ರದ ಜಿ.ಭಟ್ ಅವರಿಂದ ಭಕ್ತ ಕನಕದಾಸೆ ಹರಿಕಥೆ ಕಾಲಕ್ಷೇಪ ನಡೆಯಿತು.