ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಡಾ.ಡಿ ವೀರೇಂದ್ರ ಹೆಗ್ಗಡೆ

Update: 2017-08-16 18:09 GMT

ಬೆಳ್ತಂಗಡಿ, ಆ. 16: ಈ ಬಾರಿಯ  ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯ ಕಾರ್ಯ ಮುಂದುವರಿಸಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 600 ಶ್ರದ್ಧಾ ಕೇಂದ್ರಗಳಲ್ಲಿ 3,20,000 ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಸ್ವಚ್ಛತಾ ಅಭಿಯಾನದಿಂದ ಶ್ರದ್ಧಾ ಕೇಂದ್ರಗಳ ಸಾನ್ನಿಧ್ಯ ವೃದ್ಧಿಯಾಗಿದೆ. ದರ್ಶನಕ್ಕೆ ಬರುವ ಭಕ್ತರಲ್ಲಿ ಭಕ್ತಿಯೊಂದಿಗೆ ಪವಿತ್ರ ಮನೋಭಾವ ಮೂಡಿ ಬಂದಿದೆ. ಶ್ರದ್ಧಾ ಕೇಂದ್ರಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜನ ಜಾಗೃತಿ ಉಂಟಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

2017ರ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಶುಭಾವಸರದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದಾಗ ಕ್ಷೇತ್ರದ ಭಕ್ತರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಜಾತಿ-ಮತ ಬೇಧವಿಲ್ಲದೆ ಎಲ್ಲಾ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಸ್ವಚ್ಛತಾ ಅಂದೋಲನದ ಪರಿಣಾಮವಾಗಿ ಎಲ್ಲಾ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳು ನಡೆದು ಜನರಲ್ಲಿ ಅರಿವು ಜಾಗೃತಿ ಉಂಟಾಗಿದ್ದು ಇದು ಸ್ವಾತಂತ್ರ್ಯದಿನಾಚರಣೆಯ ಸಂದರ್ಭ ದಲ್ಲಿಯೂ ಮುಂದುವರಿದಿದೆ.

ಇದು ನಿರಂತರವಾಗಿ ನಡೆಯಬೇಕಾದ ಕರ್ತವ್ಯ ರೂಪದ, ಸೇವಾ ರೂಪದ ಸಮರ್ಪಣಾ ಕಾರ್ಯಕ್ರಮವಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಮತ್ತೆ ಮಲಿನತೆಗೆ ಅವಕಾಶ ನೀಡಬೇಡಿ. ಎಲ್ಲಾ ಪವಿತ್ರ ಶ್ರದ್ಧಾ ಕೇಂದ್ರಗಳು ಸದಾ ನಿಮ್ಮೆಲ್ಲರ ಕಣ್ಗಾವಲಿನಲ್ಲಿ ಮತ್ತು ಸೇವೆಯಲ್ಲಿ ರಕ್ಷಿಸಲ್ಪಡಲಿ ಸ್ವಚ್ಛತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಡಾ. ಹೆಗ್ಗಡೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News