ನೀರ್ಚಾಲು: ಎಂಡೋಸಲ್ಫಾನ್ ಸಂತ್ರಸ್ತ ಬಾಲಕ ಮೃತ್ಯು
ಕಾಸರಗೋಡು, ಆ.18: ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತಪಟ್ಟ ಘಟನೆ ನೀರ್ಚಾಲುವಿನಲ್ಲಿ ಗುರುವಾರ ನಡೆದಿದೆ. ನೀರ್ಚಾಲು ಪೂವಾಲಿಯ ಅಹ್ಮದ್ ಹಫೀಝ್(8) ಮೃತಪಟ್ಟ ಬಾಲಕ. ನಾಲ್ಕೂವರೆ ವರ್ಷಗಳಿಂದ ಬಾಲಕ ರೋಗಕ್ಕೆ ತುತ್ತಾಗಿದ್ದನು.
ವೈದ್ಯಕೀಯ ತಪಾಸಣೆಯ ವೇಳೆ ಹಫೀಝ್ ತಲೆಯ ರಕ್ತನಾಳದಲ್ಲಿ ಅಡಚಣೆಯಿರುವುದು ಕಂಡುಬಂದಿತ್ತು. ಇದರ ನಿವಾರಣೆಗಾಗಿ ನಾಲ್ಕು ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೂ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿರಲಿಲ್ಲ. ಜುಲೈಯಲ್ಲಿ ನಡೆದ ಎಂಡೋಸಲ್ಫಾನ್ ಶಿಬಿರದಲ್ಲಿ ಬಾಲಕನನ್ನು ತಪಾಸಣೆ ಗೈಯಲಾಗಿತ್ತು. ಬಳಿಕ ಬದಿಯಡ್ಕ ಪಂಚಾಯತ್ನ ಎರಡನೆ ವಾರ್ಡ್ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಅಹ್ಮದ್ ಹಫೀಝ್ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು .
ಬಾಲಕನ ಚಿಕಿತ್ಸೆಗಾಗಿ ಹೆತ್ತವರು ಭಾರೀ ಮೊತ್ತ ವ್ಯಯಿಸಿದ್ದು ಅಲ್ಲದೆ ವಿವಿಧ ಸಂಘ-ಸಂಸ್ಥೆಗಳು ನೆರವು ನೀಡಿದ್ದವು. ಇತ್ತೀಚೆಗೆ ಮುಳ್ಳೇರಿಯ-ಬದಿಯಡ್ಕ-ಸ್ವರ್ಗ ರೂಟ್ ನಲ್ಲಿ ಹೊಸದಾಗಿ ಸಂಚಾರ ಆರಂಭಿಸಿದ ನವದುರ್ಗಾ ಬಸ್ನ ಮೊದಲ ದಿನದ ಸಂಗ್ರಹ ಹಾಗೂ ಕಾಞಂಗಾಡ್-ಪಾಣತ್ತೂರು ರೂಟ್ನಲ್ಲಿ ಸಂಚರಿಸುವ ಮೂಕಾಂಬಿಕಾ ಬಸ್ನ ಒಂದು ದಿನದ ಕಲೆಕ್ಷನ್ ಹಣವನ್ನು ಈ ಬಾಲಕನಿಗೆ ಚಿಕಿತ್ಸೆಗಾಗಿ ನೀಡಲಾಗಿತ್ತು.