ಕಾನೂನಿನ ಪ್ರಕಾರ ದೇವಸ್ಥಾನದಿಂದ ಹಣ ನೀಡುವಂತಿಲ್ಲ: ಸಚಿವ ರೈ

Update: 2017-08-18 17:31 GMT

ಬಂಟ್ವಾಳ, ಆ. 18: ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಬಿಸಿಯೂಟದ ವ್ಯವಸ್ಥೆ ಬೇಡ ಎಂದು ಪ್ರಭಾಕರ ಭಟ್ಟರು ಸರಕಾರಕ್ಕೆ ಲಿಖಿತ ಹೇಳಿಕೆ ನೀಡಿದ್ದಾರೆ. ಮಕ್ಕಳಿಗೆ ಅನ್ನ ಬೇಕಾದರೆ ಬರೆದುಕೊಟ್ಟರೆ ಸರಕಾರದ ವತಿಯಿಂದ ಅನುದಾನಿತ ಶಾಲೆಗಳಿಗೂ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ಕೊಲ್ಲೂರಿನಿಂದ ಇಲ್ಲಿಗೆ ಹಣದ ರೂಪದಲ್ಲಿ ದುಡ್ಡು ಬರುತ್ತಿತ್ತು. ಕಾನೂನಿನ ಪ್ರಕಾರ ದೇವಸ್ಥಾನದಿಂದ ಅದನ್ನು ನೀಡುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಶುಕ್ರವಾರ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಗೆ ಗುಂಡೂರಾವ್ ಸರಕಾರ ಇದ್ದಾಗ ಜಮೀನು ನೀಡಲಾಗಿತ್ತು. ಶಾಲೆಗೆ ಕಾಂಗ್ರೆಸ್ ಸರಕಾರ ಜಮೀನು ನೀಡಿದೆ. ಅವರಿಗೆ ಅಂತಹ ಕೃತಜ್ಞತೆ ಇಲ್ಲ. ಕೃತಘ್ನರು ಎಂದರು. ಪುಣಚದಲ್ಲಿ ಸುಬ್ಬಣ್ಣ ಶಾಸ್ತ್ರಿ ಎಂಬವರಿಂದ ಶಾಲೆ ಪ್ರಾರಂಭವಾಗಿ, ಅವರ ಮೊಮ್ಮಗ ಹರ್ಷ ಶಾಸ್ತ್ರಿ ಶಾಲೆಯನ್ನು ನಿರ್ವಹಿಸುತ್ತಿದ್ದಾಗ ಆ ಶಾಲೆಯನ್ನು ಮುಚ್ಚಿಸಲು ಭಟ್ ಸಹಿತ ಸಂಘಪರಿವಾರದವರು ಪುಣಚ ಶ್ರೀದೇವಿ ಪ್ರೌಢ ಶಾಲೆಯನ್ನು ಮಾಡಿ ಶಾಸ್ತ್ರಿಯವರ ಶಾಲೆಗೆ ಮಕ್ಕಳು ಹೋಗದಂತೆ ತಡೆದಿದ್ದರು. ಮಕ್ಕಳನ್ನು ಹೊರಗೆ ಹಾಕುವ ಕೆಲಸ ಮಾಡಿದ್ದರು. ಅವರ ಅನ್ನದ ಬಟ್ಟಲನ್ನು ಎಸೆದಿದ್ದರು. ಹಲವಾರು ಸಮಯ ಶಾಲೆ ಬಂದಾಗಿತ್ತು. ಎಂಟು ದಿನದ ನಂತರ ಬಾಗಿಲು ತೆರೆದಾಗ ಮಕ್ಕಳು ಬಿಟ್ಟು ಹೋಗಿದ್ದ ಟಿಫಿನ್ ಬಾಕ್ಸ್‌ನ ಅನ್ನದಲ್ಲಿ ಹುಳವಾಗಿತ್ತು ಎಂದು ಈ ಹಿಂದೆ ಇಂತಹ ಘಟನೆಗಳು ನಡೆದಿರುವುದಾಗಿ ವಿವರಿಸಿದರು.

 ಮಕ್ಕಳು ಅನ್ನಕ್ಕಾಗಿ ಭಿಕ್ಷ ಬೇಡುವಂತೆ ಘೋರ ಕೃತ್ಯವನ್ನು ಮಾಡಿಸಬಾರದು. ಇವರು ಬಂಡವಾಳ ಶಾಹಿಗಳಿಂದ ಕಲೆಕ್ಷನ್ ಮಾಡುತ್ತಾರಲ್ಲ. ದುಡ್ಡಿಗಾಗಿ ಅಧಿಕಾರ ದುರುಪಯೋಗ ಮಾಡಿದ್ದಾರಲ್ಲ ಅದೇ ದುಡ್ಡಿನಿಂದ ಅನ್ನ ನೀಡಲಿ. ಇಲ್ಲವಾದರೆ ಸರಕಾರದ ಅನುದಾನಕ್ಕೆ ಬರೆದುಕೊಳ್ಳಲಿ ಎಂದು ಸೂಚಿಸಿದರು.

ಶಾಲಾ ಮಕ್ಕಳನ್ನು ಇವರು ಬೇಡಲು ಕಳುಹಿಸುವುದು ಬೇಡ. ಭಟ್ಟರೇ ಊರೂರು ಬೇಡಲಿ, ಮಕ್ಕಳಿಗೆ ಕೊಲ್ಲೂರಿನಿಂದ ತಮ್ಮ ಊಟಕ್ಕೆ ಅನುದಾನ ಬರುತ್ತದೆ ಎಂಬುದು ಹೇಗೆ ಗೊತ್ತಿರುತ್ತದೆ ಎಂದು ಕೇಳಿದರು. ದೇವಸ್ಥಾನಗಳು ಧಾರ್ಮಿಕ ಪರಿಷತ್ ಅಡಿಯಲ್ಲಿ ಬರುತ್ತದೆ. ಅದನ್ನು ಮಾಡಿದ್ದೇ ಬಿಜೆಪಿ ಯವರು. ಅದರಲ್ಲಿಯೇ ಎಲ್ಲಿಗೆ ಅನುದಾನ ನೀಡಬೇಕು. ನೀಡಬಾರದು ಎಂದು ತೀರ್ಮಾನವಾಗಿದೆ ಎಂದರು.

ರಮಾನಾಥ ರೈ ಸುಪರ್ದಿಯಲ್ಲಿರುವ ಶಾಲೆಯ ಬಗ್ಗೆ ಇವರು ಮಾತನಾಡುತ್ತಾರಲ್ವ. ಆ ಶಾಲೆ ನಮ್ಮ ಸ್ವಂತ ಜಮೀನಿನಲ್ಲಿದೆ. ಅದು ಸರಕಾರದ ಜಾಗವಲ್ಲ ಎಂದು ಸ್ಪಷ್ಟಪಡಿಸಿದರು.

ಕಲ್ಲಡ್ಕ ಪುಣಚ ಶಾಲೆಗೆ ಬರುವ ಅನುದಾನ ನಾನು ತಡೆದಿಲ್ಲ. ಕಾನೂನು ಪ್ರಕಾರ ಅದಾಗಿದೆ. ನಾನು ಯಾವುದೇ ಶಾಲೆಯ ಮಕ್ಕಳನ್ನು ಹೊರಗೆ ಹಾಕುವ ಕೆಲಸ ಮಾಡಿಲ್ಲ. ಪುಣಚದಲ್ಲಿ ಸಂಘಪರಿವಾರದವರು ಸ್ಥಳೀಯ ರಾಜೇಶ್ ಬಾಳೆಕಲ್ಲು ಅವರ ನಾಲ್ಕುನೂರು ಹಾಲು ಬರುವ ರಬ್ಬರ್ ಮರವನ್ನು ರಾತ್ರಿ ಹಗಲಾಗುವುದರಲ್ಲಿ ಈ ಹಿಂದೆ ಕಡಿಸಿ ಹಾಕಿದ್ದಾರೆ. ಇಂತಹ ಕೃತ್ಯ ರಮಾನಾಥ ರೈ ಮಾಡಿಸಿಲ್ಲ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್‌ರಿಗೆ ಕೇಂದ್ರ ಸರಕಾರದ ವ್ಯಾಪ್ತಿಯ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ದುಸ್ಥಿತಿಯನ್ನೇ ನಿವಾರಿಸಲು ಸಾಧ್ಯವಾಗಿಲ್ಲ. ಇನ್ನು ನಂಬರ್ ಒನ್ ಸಂಸದ ಎಂಬುದು ಹೇಗಾಗುತ್ತಾರೆ. ? ಇವರೇ ನಂಬರ್ ಒನ್ ಆಗಿದ್ದರೆ ರಾಜ್ಯದ ಇನ್ನುಳಿದ ಬಿಜೆಪಿ ಸಂಸದರು ಹೇಗಿದ್ದಾರು ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ ಜೈನ್,ಎಂ. ಎಸ್.ಮಹಮ್ಮದ್, ಮಂಜುಳಾ ಮಾವೆ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಸದಸ್ಯರಾದ ಕೆ.ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯ ಗಂಗಾಧರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಮಾದವ ಮಾವೆ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ರಾಜೇಶ್ ಬಾಳೆಕಲ್ಲು, ಪದ್ಮನಾಭ ಪೂಜಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಮತ್ತು ಎಸ್‌ಡಿಪಿಐ ಮುಖಂಡ ಆಶ್ರಫ್ ಕಲಾಯಿ ಕೊಲೆಗೆ ಇಲ್ಲಿನ ಮತೀಯವಾದಿ ಸಂಘಟನೆಯೇ ಕಾರಣವಾಗಿದ್ದು, ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆ ಕಾರ್ಯ ವೈಖರಿ ಅಭಿನಂದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ಹೇಳಿದ್ದಾರೆ.
 

ಈ ಕೃತ್ಯ ಕೋಮು ಸಂಘರ್ಷ ಅಲ್ಲ ಎಂಬುದು ಸಾಬೀತಾಗಿದೆ. ಈ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ಮಾಡುವವರನ್ನು ದೇವರೆ ಶಿಕ್ಷಿಸಲಿ. ಈ ಜಿಲ್ಲೆ ಭಯ ಮುಕ್ತ ಆಗಬೇಕಾಗಿದ್ದು, ಮುಂದಕ್ಕೆ ಇಂತಹ ಕೃತ್ಯ ನಡೆಯದೆ ನಿರಂತರ ಶಾಂತಿ ಸುವ್ಯವಸ್ಥೆ ನೆಲೆಸಬೇಕು. ಜಿಲ್ಲೆಯಲ್ಲಿ ಶಾಂತಿ ಮತ್ತು ಆರೋಪಿಗಳ ಪತ್ತೆಗಾಗಿ ನಾನು ಹಿಂದು , ಕ್ರೈಸ್ತ, ಮುಸಲ್ಮಾನ ಮೂರು ಧರ್ಮಿಯರ ಕ್ಷೇತ್ರದಲ್ಲಿ ಪ್ರಾರ್ಥಿಸಿದ್ದೇನೆ. ಹತ್ಯೆ ನಡೆಸಿದವರು ಸಿಕ್ಕಿದ್ದಾರೆ. ಸುಳಿವು ಸಿಕ್ಕಿದೆ. ಅಪಪ್ರಚಾರ ಮಾಡಿದವರಿಗೂ ಶಿಕ್ಷೆ ಆಗಬೇಕು ಇದಕ್ಕಾಗಿ ಎಲ್ಲಾ ಧರ್ಮಿಯರ ಕ್ಷೇತ್ರದಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News