ಆ.20: ಮಾನವ ಬಂಧುತ್ವ ವೇದಿಕೆ ಸಮಾವೇಶ
ಉಡುಪಿ, ಆ.18: ಕರ್ನಾಟಕ ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶ್ರೀನಾರಾಯಣ ಗುರುಗಳ ಜಯಂತಿ ಮತ್ತು ಮಂಗಳೂರು ವಲಯ ಸಮಾವೇಶವನ್ನು ಆ.20ರಂದು ಬೆಳಗ್ಗೆ 10ಗಂಟೆಗೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಶ್ರೀನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಮಾವೇಶವನ್ನು ಬೈಲಹೊಂಗಳ ತಾಲೂಕಿನ ಬೇವಿನಕೊಪ್ಪ ಆನಂದ ಮಠದ ನಿತ್ಯಾನಂದ ಧ್ಯಾನ ಕೇಂದ್ರದ ಶ್ರೀವಿಜಯಾನಂದ ಸ್ವಾಮಿ ಉದ್ಘಾಟಿಸಲಿರುವರು. ಮಾಜಿ ಸಚಿವ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಕಾಪು ಶಾಸಕ ವಿನಯ ಕುಮಾರ್ ಸೊರಕೆ ಭಾಗವಹಿಸಲಿರುವರು. ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್ ‘ವೈದಿಕ ಧರ್ಮದ ಅಮಾನವೀಯತೆಯನ್ನು ದಿಕ್ಕರಿಸಿದ ನಾರಾಯಣಗುರು ಪರಂಪರೆ’ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ‘ನಾರಾಯಣಗುರುಗಳ ಸಿದ್ಧಾಂತ ಮತ್ತು ವರ್ತಮಾನ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು.
ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೇಡ್ ಡಿಸೋಜ ವಹಿಸಲಿರುವರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಡಾ.ರಾಜಶೇಖರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಂಗಳೂರು ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ದಿನೇಶ್ ಕೋಟ್ಯಾನ್, ಕಾಪು ಸಂಚಾಲಕ ನಾಗೇಶ್ ಕಾಪು, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ವಿ.ಶೆಟ್ಟಿ, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.