ಭಟ್ಕಳ: ಲಾಭದಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮ-ರಾಜೇಂದ್ರ ನಾಯ್ಕ

Update: 2017-08-24 16:39 GMT

ಭಟ್ಕಳ, ಆ. 24: ನಷ್ಟದಲ್ಲಿದ್ದ ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ಇಂದು ಅಭಿವೃದ್ದಿ ಪರವಾದ ಯೋಜನೆಯಿಂದ 2016-2017 ನೇ ಸಾಲಿನಲ್ಲಿ 4.38 ಕೋಟಿ ರೂ. ಲಾಭ ಗಳಿಸಿದ್ದಲ್ಲದೇ ಪಡೆದುಕೊಂಡಿದ್ದ ಮೀನುಗಾರಿಕಾ ಸಾಲವನ್ನೂ ಮರುಪಾವತಿ ಮಾಡಿ ಸಂಕಷ್ಟದಲ್ಲಿರುವ ಮೀನುಗಾರರ ಸಾಲವನ್ನೂ ಇದೇ ಮೊದಲ ಬಾರಿಗೆ ಮನ್ನಾ ಮಾಡಿ ಜನಮೆಚ್ಚುಗೆ ಗಳಿಸಿದೆ ಎಂದು ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಹೇಳಿದರು.

ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮೀನುಗಾರಿಕಾ ಅಭಿವೃದ್ದಿ ನಿಗಮವು ಈ ಹಿಂದೆ ರೋಗಗ್ರಸ್ತವಾಗಿತ್ತು. ತನ್ನ ಸಿಬ್ಬಂದಿಗೆ ಸಂಬಳ, ಭತ್ಯೆ ಮತ್ತು ಇತರೇ ಅಗತ್ಯದ ಸವಲತ್ತುಗಳನ್ನು ನೀಡಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದು ಇದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಸ್ಥೆಯ ಅಭಿವೃದ್ದಿಗೆ 10 ಕೋಟಿ ರೂ. ಮಂಜೂರಾತಿ ನೀಡಿದರು. ಈ ಅನುದಾನದಿಂದ ಮೀನುಗಾರಿಕಾ ನಿಗಮದಿಂದ ವಿವಿಧ ಪಟ್ಟಣಗಳಲ್ಲಿ ತಾಜ ಮೀನುಮಾರಾಟ ಮಳಿಗೆ ಹಾಗೂ ಮತ್ಸ್ಯದರ್ಶಿನಿ ಉಪಹಾರ ಗೃಹಗಳನ್ನು ತೆರೆಯಲಾಗಿದ್ದು ಇದರಿಂದ ಸಂಸ್ಥೆಗೆ ಅಪಾರ ಲಾಭ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ನಿರೀಕ್ಷಿಸಲಾಗಿದೆ ಎಂದರು.

ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ. ಹಾಗೂ ದಕ್ಷಿಣ ಕನ್ನಡದ ಜಿಲ್ಲೆಯ ಮೀನುಗಾರರು ಹಲವಾರು ವರ್ಷಗಳಿಂದ ಮೀನುಗಾರಿಕೆ ನಡೆಸಿ ನಷ್ಟಕ್ಕೊಳಗಾದ ಮೀನುಗಾರರ ಸುಮಾರು 60 ಲಕ್ಷದ 57 ಸಾವಿರದ 939 ರೂ ಹಣವನ್ನು ಮನ್ನಾ ಮಾಡಿದ್ದು ಇದು ಮೀನುಗಾರಿಕಾ ಅಭಿವೃದ್ದಿ ನಿಗಮದ ಇತಿಹಾಸದಲ್ಲಿ ಮೊಟ್ಟ ಮೊದಲಾಗಿದೆ.

ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ 41 ಮೀನುಗಾರರ 35 ಲಕ್ಷ 13 ಸಾವಿರದ 872ರೂ ಸಾಲ ಮನ್ನಾ ಮಾಡಲಾಗಿದೆ ಎಂದರಲ್ಲದೇ ನಮ್ಮ ಜಿಲ್ಲೆಯ ಅತಿ ಹೆಚ್ಚು ಮೀನುಗಾರರು ಮೀನುಗಾರಿಕಾ ಅಭಿವೃದ್ದಿ ನಿಗಮದಿಂದ ಪ್ರಯೋಜನ ಪಡೆದಿದ್ದಾರೆ.ನಷ್ಟದಲ್ಲಿದ್ದ ಈ ನಿಗಮ ಈಗ ಲಾಭದಲ್ಲಿದೆ ಎಂದರು.

ಮೀನುಗಾರರಿಗೆ ರಿಯಾಯಿತು ದರದಲ್ಲಿ ಡೇಸೆಲ್ ನೀಡುತ್ತಿದ್ದು ಕರಾವಳಿ ಜಿಲ್ಲೆಯಲ್ಲಿರುವ ಐಸ್ ಪ್ಲಾಂಟಗಳನ್ನು ಅಭಿವೃದ್ದಿಗೊಳಿಸಿದ್ದೇವೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆಯವರ ಪ್ರಯತ್ನದಿಂದ ಕರ್ನಾಟಕ ಸರ್ಕಾರ, ಕೈಗಾರಿಕಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಅನುದಾನದಿಂದ 13 ಕೋಟಿ ರೂ. ಮೊತ್ತದ ಬೃಹತ್ ಆಧುನಿಕ ಮೀನು ಸಂಸ್ಕರಣಾ ಘಟಕ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂ. ಅಧ್ಯಕ್ಷ ಈಶ್ವರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ, ಸದಸ್ಯ, ಮಾಬ್ಲೇಶ್ವರ ನಾಯ್ಕ, ಮೀನುಗಾರಿಕಾ ನಿಗಮದ ನಿರ್ದೇಶಕ ರಾಮಾ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಪ್ರಮುಖರಾದ ಟಿ.ಡಿ.ನಾಯ್ಕ, ಗಣಪತಿ ನಾಯ್ಕ, ಕೆ,ಜೆ ನಾಯ್ಕ, ಯೋಗೇಶ ಮೊಗೇ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News