ಭಾವಿ ಪಲಿಮಾರು ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ
ಉಡುಪಿ, ಆ.27: ಮುಂದಿನ ಜನವರಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಎರಡನೆ ಬಾರಿಗೆ ಪೀಠಾರೋಹಣ ಮಾಡಲಿರುವ ಪಲಿ ಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತವನ್ನು ರವಿವಾರ ನೆರವೇರಿಸಲಾಯಿತು.
ಪಲಿಮಾರು ಮಠದ ದೇವರು, ಶ್ರೀಕೃಷ್ಣ, ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ ಮತ್ತು ಚಂದ್ರವೌಳೀಶ್ವರ ಸೇರಿದಂತೆ ಎಲ್ಲ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪಲಿಮಾರು ಮಠದಿಂದ ಶ್ರೀಕೃಷ್ಣ ಮಠದ ಮಧ್ವ ಸರೋವರದ ಬಳಿ ಇರುವ ಕಟ್ಟಿಗೆ ರಥ ನಿರ್ಮಾಣದ ಸ್ಥಳಕ್ಕೆ ಕಟ್ಟಿಗೆಯನ್ನು ಹೊತ್ತು ಮೆರವಣಿಗೆಯಲ್ಲಿ ತರಲಾಯಿತು.
ತದನಂತರ ಹೆರ್ಗ ವೇದವ್ಯಾಸ ಭಟ್ ಪೌರೋಹಿತ್ಯದಲ್ಲಿ ಕಟ್ಟಿಗೆ ರಥದ ಕಂಬಕ್ಕೆ ಪೂಜೆ ನೆರವೇರಿಸಿ ಮುಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ, ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಧಾರ್ಮಿಕ ಮುಖಂಡ ರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಹರಿಕೃಷ್ಣ ಪುನರೂರು, ಲಕ್ಷ್ಮಿ ನಾರಾ ಯಣ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಕಟ್ಟಿಗೆ ಮುಹೂರ್ತ ಮೂರನೆ ಯದ್ದು. ಇದಕ್ಕೂ ಮೊದಲು ಬಾಳೆ ಹಾಗೂ ಅಕ್ಕಿ ಮುಹೂರ್ತಗಳು ನಡೆದಿದ್ದು, ಮುಂದೆ ಭತ್ತ ಮುಹೂರ್ತ ನಡೆಯಲಿದೆ. ಕಟ್ಟಿಗೆ ಮುಹೂರ್ತ ನಡೆದ ಸ್ಥಳದಲ್ಲಿ ಒಂದು ತಿಂಗಳಲ್ಲಿ ಕಟ್ಟಿಗೆ ರಥ ನಿರ್ಮಾಣವಾಗಲಿದ್ದು, ಈ ಕಟ್ಟಿಗೆಯನ್ನು ಪರ್ಯಾಯದ ಅವಧಿಯಲ್ಲಿ ಅಡುಗೆ ಮಾಡಲು ಬಳಲಾಗುತ್ತದೆ.