ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಿಗೆ ಸನ್ಮಾನ
ಮಂಗಳೂರು, ಆ.28: ಮಸೀದಿ, ಮದ್ರಸಗಳಲ್ಲಿ ಕಾರ್ಯನಿರ್ವಹಿಸುವ ಖತೀಬ್ ಮತ್ತು ಉಸ್ತಾದರಿಗೆ ಅವರ ವಾಸ್ತವ್ಯ ಪ್ರದೇಶದಲ್ಲಿ ವ್ಯಾಪಾರ ನಡೆಸಲು ಶ್ರಮಶಕ್ತಿ ಯೋಜನೆಯಡಿ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ದ.ಕ ಜಿಲ್ಲಾ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಎನ್.ಎಸ್ ಕರೀಂರವರಿಗೆ ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನಲ್ಲಿ ರವಿವಾರ ಅಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮಹತ್ವ ನೀಡುತ್ತಿದೆ. ಬಜೆಟ್ನಲ್ಲಿ 2,700 ಕೋಟಿ ಹೆಚ್ಚು ಮಾಡಿದೆ.ಅಲ್ಲದೆ ಖತೀಬ್ ಮತ್ತು ಉಸ್ತಾದರಿಗೆ ಧನ ಸಹಾಯವನ್ನು ಹೆಚ್ಚಿಸಲಾಗಿದೆ ಎಂದರು.
ಅಲ್-ಮದೀನಾ ವಿದ್ಯಾಸಂಸ್ಥೆಯ ಶಿಲ್ಪಿಹಾಜಿ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ದುಆ ನೆರವೇರಿಸಿದರು. ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು , ದ.ಕ. ಕೃಷಿಕ ಸಮಾಜದ ಅಧ್ಯಕ್ಷ ಎ.ಎ. ಹೈದರ್ ಪರ್ತಿಪ್ಪಾಡಿ, ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್ ಮೀನಾಕೋಡಿ, ಸದಸ್ಯರಾದ ಮುರಳೀಧರ್ ಶೆಟ್ಟಿ ಮೋರ್ಲ, ಅಬ್ದುಲ್ ರಹ್ಮಾನ್ ಚಂದಹಿತ್ಲು, ಅಬ್ದುಲ್ ಲತೀಫ್ ಕಾಪಿಕಾಡ್, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯ ಕುಂಞಿಬಾವ ಹಾಜಿ ಕಲ್ಕಟ್ಟ, ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ, ಎಸ್ವೈಎಸ್ ಮಂಜನಾಡಿ ಸೆಂಟರ್ ಕಾರ್ಯಕರ್ತ ಮಹಮೂದ್ ಹಾಜಿ ಕಂಡಿಗ ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಪ್ರಾಂಶುಪಾಲ ಮುನೀರ್ ಅಹ್ಮದ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.