ಅಲ್ಪಸಂಖ್ಯಾತರ ಯೋಜನೆಗಳ ಪ್ರಯೋಜನ ಪಡೆಯಲು 21 ಕಡೆಗಳಲ್ಲಿ ಅಭಿಯಾನ
ಮಂಗಳೂರು, ಆ.28: ರಾಜ್ಯದಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ಕಾಲನಿಗಳ ಅಭಿವೃದ್ಧಿಗಾಗಿ 2016-17, 2017-18ನೆ ಸಾಲಿನ ಬಜೆಟಿನಲ್ಲಿ 800 ಕೋ.ರೂ. ಮೀಸಲಿಡಲಾಗಿದ್ದು, ಆ ಪೈಕಿ ದ.ಕ. ಜಿಲ್ಲೆಯಲ್ಲಿ 4 ಕೋ.ರೂ. ಬಿಡುಗಡೆ ಮಾಡಲಾಗಿದೆ. ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಯೋಜನೆಗಳ ಪ್ರಯೋಜ ಪಡೆಯಲು 21 ಕಡೆಗಳಲ್ಲಿ ಅಭಿಯಾನ ಕಾರ್ಯಕ್ರಮವನ್ನು ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಏರ್ಪಡಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಅದರಲ್ಲೂ ಕ್ರೈಸ್ತರಿಗೆ ಮೀಸಲಿಟ್ಟ ಅನುದಾನಗಳ ಬಗ್ಗೆ ಮಾಹಿತಿ ನೀಡಲು ಮುಲ್ಕಿ, ಕಿನ್ನಿಗೋಳಿ, ಬಜ್ಪೆ, ನೀರುಡೆ, ತಾಕೋಡೆ, ಮೂಡುಬಿದಿರೆ, ಅಲಂಗಾರು ಮುಂತಾದ ಕಡೆಗಳಲ್ಲಿ ಕ್ರೈಸ್ತ ಅಲ್ಪಸಂಖ್ಯಾತರ ಸಭೆಗಳನ್ನು ಐವನ್ ಡಿಸೋಜ ನಡೆಸಿದರು. ಈ ಸಂದರ್ಭ ಅಲ್ಪಸಂಖ್ಯಾತರಿಗೆ ಸಿಗುವ ಯೋಜನೆಗಳ ಕಿರು ಹೊತ್ತಿಗೆಯನ್ನು ಹಂಚಲಾಯಿತು. ಕಿನ್ನಿಗೋಳಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐವನ್ ಡಿಸೋಜ ಅಲ್ಪಸಂಖ್ಯಾತರಿಗೆ ಸಿಗುವ ಯೋಜನೆಗಳನ್ನು ಅದರಲ್ಲೂ ಶಿಕ್ಷಣ ಮತ್ತು ಸ್ವಂತ ಉದ್ಯೋಗ, ಚರ್ಚ್ ಪುನರ್ ನಿರ್ಮಾಣ ಕಾಲನಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಕಾರದ ಅನುದಾನವನ್ನು ಫಲಾನುಭವಿಗಳು ಉಪಯೋಗಿಸುವಂತೆ ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಉಸ್ಮಾನ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಭಂಡಾರಿ, ಕಿನ್ನಿಕೋಳಿ ಚರ್ಚ್ನ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೆರೊ, ಶೈಲಾ ಸಿಕ್ವೇರಾ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.