ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ತಲೆಮರಸಿಕೊಂಡಿದ್ದ ಆರೋಪಿ ಸೆರೆ

Update: 2017-08-28 16:51 GMT

ಪುತ್ತೂರು,ಆ28: ಕಳೆದ 2 ವರ್ಷಗಳ ಹಿಂದೆ ನಡೆದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಹಸೈನಾರ್ ಎಂಬವರ ಪುತ್ರ ಜಬ್ಬಾರ್ ಬಂಧಿತ ಆರೋಪಿ.

ಕಳೆದ 21-6-2015ರಂದು ಪುತ್ತೂರು ನಗರದ ಮುಖ್ಯರಸ್ತೆಯಲ್ಲಿರುವ ಅಂಗಡಿಯೊಂದರ ಬಳಿಯಲ್ಲಿ ನಿಲ್ಲಿಸಲಾಗಿದ್ದ ದೇವಿಪ್ರಸಾದ್ ಎಂಬವರ ಬೈಕ್ ಕಳವು ನಡೆಸಲಾಗಿತ್ತು. ಪ್ರಕಣಕ್ಕೆ ಸಂಬಂಧಿಸಿ ಜಬ್ಬಾರ್ ಮತ್ತು ತಲ್‍ಹತ್ ಎಂಬವರನ್ನು ಆ ಸಂದರ್ಭದಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬಳಿಕ ಜಬ್ಬಾರ್ ವಿದೇಶಕ್ಕೆ ಪ್ರಯಾಣಿಸಿ ತಲೆಮರೆಸಿಕೊಂಡಿದ್ದು, ರವಿವಾರ ಈತ ವಿದೇಶದಿಂದ ಆಗಮಿಸುತ್ತಿರುವ ಮಾಹಿತಿ ಅರಿತ ನಗರ ಪೊಲೀಸರು ಆರೋಪಿಯನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನಗರಠಾಣಾ ಪಿಎಸ್‍ಐ ಐ. ವೆಂಕಟೇಶ್, ಪೊಲೀಸರಾದ ಪರಮೇಶ್ವರ, ಜಯರಾಮ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News