ಬಕ್ರೀದ್ - ದ.ಕ.ಜಿಲ್ಲೆಯಲ್ಲಿ ಸೆ. 1ರಂದು ರಜೆ
ಮಂಗಳೂರು, ಆ. 30: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಮರು ಸೆ.1ರ ಶುಕ್ರವಾರದಂದು ಬಕ್ರೀದ್ ಹಬ್ಬವನ್ನು ಆಚರಿಸುತ್ತಿರುವುದರಿಂದ ಅಂದು ಈ ಜಿಲ್ಲೆಗಳಿಗೆ ಸರಕಾರಿ ರಜೆಯನ್ನು ಘೋಷಿಸಲಾಗಿದೆ ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಚಂದ್ರದರ್ಶನದ ಆಧಾರದಲ್ಲಿ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಸೆ.1ರಂದು ಬಕ್ರೀದ್ ಆಚರಿಸುವ ಬಗ್ಗೆ ಧಾರ್ಮಿಕ ಮುಖಂಡರು ತೀರ್ಮಾನ ಕೈಗೊಂಡಿದ್ದರು.
ಸರಕಾರಿ ರಜೆಯು ಸೆ.2ರಂದು ಘೋಷಣೆಯಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕರಾವಳಿಯ ಜಿಲ್ಲೆಗಳಿಗೆ ಸೆ.1ರಂದೇ ರಜೆ ಘೋಷಿಸುವಂತೆ ಸಚಿವ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಖಾದರ್ ಅವರ ಕೋರಿಕೆಯಂತೆ ಮುಖ್ಯಮಂತ್ರಿಯವರು ಸರಕಾರಿ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿ ನಿಯಮಾವಳಿಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದರು.
ಇದೀಗ ಸೆ.1ರಂದು ಬಕ್ರೀದ್ ಆಚರಿಸುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ಸೆ.1ರಂದೇ ರಜೆ ಘೋಷಿಸಿ ಸರಕಾರ ಆದೇಶ ನೀಡಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೆ. 2ರಂದು ನಿಗದಿಯಾಗಿದ್ದ ಬಕ್ರೀದ್ ರಜೆಯನ್ನು ಬದಲಾಯಿಸಿ, ದ.ಕ. ಜಿಲ್ಲೆಯಲ್ಲಿ ಸೆಪ್ಟೆಂಬರ್ 1ರಂದು ಸರಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ರಜೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಸೆಪ್ಟೆಂಬರ್ 2ರಂದು ಎಂದಿನಂತೆ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ಕಾಯ೯ ನಿವ೯ಹಿಸಲಿವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.