ಶಾಂತಿಗಾಗಿ ಗುಜರಾತ್- ಮಹಾರಾಷ್ಟ್ರ ಪಾದಯಾತ್ರೆ: ಜಯಪ್ರಕಾಶ್ ಶೆಟ್ಟಿ
ಉಡುಪಿ, ಆ.30: ಸಮಾಜಕ್ಕೆ ಶಾಂತಿಯ ಸಂದೇಶ ನೀಡುವ ನಿಟ್ಟಿನಲ್ಲಿ ಉಡುಪಿ ಕಡೆಕಾರಿನ ನಿವಾಸಿ ಜಯಪ್ರಕಾಶ್ ಶೆಟ್ಟಿ ಅ.1ರಿಂದ ಅ.31ರವರೆಗೆ ಗುಜರಾತಿನ ಸಬರಮತಿ ಆಶ್ರಮದಿಂದ ಮಹಾರಾಷ್ಟ್ರದ ವರ್ದಾ ಜಿಲ್ಲೆಯ ಸೇವಾಗ್ರಾಮದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಬೊಲೋ ವಂದೆ ಮಾತರಂ ಎನ್ಜಿಓ ಸಂಸ್ಥೆಯ ಜಯಪ್ರಕಾಶ್ ಶೆಟ್ಟಿ ಈ ವಿಷಯ ತಿಳಿಸಿದರು. ಕೋಮು ವಾದಿಗಳ ಗುಂಡಿಗೆ ಬಲಿಯಾದ ಗಾಂಧೀಜಿಯ ಅ.2ರ ಜನ್ಮದಿನಾಚರಣೆ ಯಂದು ಪಾದಯಾತ್ರೆಯನ್ನು ಆರಂಭಿಸಿ ಭಯೋತ್ಪಾದಕರ ಗುಂಡಿಗೆ ಬಲಿ ಯಾದ ಇಂದಿರಾಗಾಂಧಿ ಅವರ ಅ.31ರ ಸ್ಮತಿ ದಿನಾಚರಣೆಯಂದು ಕೊನೆ ಗೊಳಿಸಲಾಗುವುದು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಮೂಲಕ ಸುಮಾರು 850 ಕಿ.ಮೀ. ದೂರ ತ್ರಿವರ್ಣ ಧ್ವಜದೊಂದಿಗೆ ಪಾದಯಾತ್ರೆ ನಡೆಸಲಾಗುವುದು ಎಂದರು.
1998ರಲ್ಲಿ ಮುಂಬೈ- ಅಮೃತಸರ, 2006ರಲ್ಲಿ ಕಾಸರಗೋಡು- ಮುಂಬೈ, 2017ರ ಮಾರ್ಚ್ನಲ್ಲಿ ಉಡುಪಿ- ಮುಂಬೈಯವರೆಗೆ ಪಾದಯಾತ್ರೆಯನ್ನು ನಡೆಸಿದ್ದೇನೆ. ಈ ಬಾರಿಯ ಪಾದಯಾತ್ರೆಯಲ್ಲಿ ಸ್ಥಳೀಯ ಎನ್ಜಿಒಗಳನ್ನು ಕೂಡ ಸೇರಿಸಿಕೊಳ್ಳಲಾಗುವುದು. ಪ್ರತಿದಿನ ಬೆಳಗ್ಗೆ 6:30ರಿಂದ ಸೂರ್ಯಾಸ್ತಮ ದವರೆಗೆ ಪಾದಯಾತ್ರೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.