‘ಸಂಚಲನ’ ಕಿರುಚಿತ್ರ ಸೆ.2ಕ್ಕೆ ಬಿಡುಗಡೆ
ಉಡುಪಿ, ಆ.30: ಕರಾವಳಿ ಜಿಲ್ಲೆಗಳಲ್ಲಿ ಜನರ ಸಂಕಷ್ಟಗಳಿಗೆ ಕಾರಣವಾ ಗಿರುವ ಮರಳಿನ ಕೊರತೆ ಹಾಗೂ ಮರಳು ಮಾಫಿಯಾ ಕುರಿತ ಕಿರುಚಿತ್ರ ‘ಸಂಚಲನ’ವನ್ನು ಸೆ.2ರಂದು ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರದ ನಿರ್ಮಾಪಕ ರಾಘವೇಂದ್ರ ಶೇರಿಗಾರ್ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 32 ನಿಮಿಷಗಳ ಈ ಕಿರುಚಿತ್ರವನ್ನು 2.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಥಿಕ್ ಮುರ್ಡೇಶ್ವರ ಹಾಗೂ ಶ್ರೀನಿಧಿ ಶೆಟ್ಟಿ ಅವರು ಚಿತ್ರದ ನಾಯಕ-ನಾಯಕಿಯ ರಾಗಿ ಅಭಿನಯಿಸಿದ್ದಾರೆ. ಪ್ರಶಾಂತ್ ಗೋಪಾಡಿ ಕಥೆಗೆ ಚಿತ್ರಕಥೆ-ಸಂಭಾಷಣೆ- ನಿರ್ದೇಶನವನ್ನು ಅರ್ಜುನ್ದಾಸ್ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ಸಂದೇಶ್ ಮಂಗಳೂರು ಹಾಗೂ ಜಯಂತ್ ಐತಾಳ್ ಅವರದ್ದಾದರೆ, ಅಕ್ಷಯ್ಕುಮಾರ್ ಛಾಯಾಗ್ರಾಹಕರು.
ಅಕ್ರಮ ಮರಳುಗಾರಿಕೆಯ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕಿರುಚಿತ್ರವನ್ನು ‘ಯೂ ಟ್ಯೂಬ್’ ಮೂಲಕ ಬಿಡುಗಡೆಗೊಳಿಸಲಾಗುತ್ತದೆ. ಬಿಡುಗಡೆ ಸಮಾರಂಭ ಸೆ.2ರಂದು ಸಂಜೆ 5:00ಕ್ಕೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಸಚಿವ ವಿನಯಕುಮಾರ್ ಸೊರಕೆ ಚಿತ್ರವನ್ನು ಬಿಡುಗಡೆಗೊಳಿಸಲಿದ್ದಾರೆ. ಡಾ. ಎಚ್.ಶಾಂತರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅರ್ಜುನದಾಸ್, ನಟರಾದ ರಥಿಕ್ ಮುರ್ಡೇಶ್ವರ, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ಗೋಪಾಡಿ ಉಪಸ್ಥಿತರಿದ್ದರು.