ಕುಂದಾಪುರ: ಕೆಎಸ್ಸಾರ್ಟಿಸಿ ಬಸ್ನಿಲ್ದಾಣ ಬಳಿ ಖಾಸಗಿ ವಾಹನ ನಿಲುಗಡೆಗೆ ನಿಷೇಧ
ಉಡುಪಿ, ಆ.30: ಕುಂದಾಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಸುತ್ತಮುತ್ತ 300ಮೀ. ವ್ಯಾಪ್ತಿಯಲ್ಲಿ ಖಾಸಗಿ ಬಸ್, ಟೆಂಪೊ ಹಾಗೂ ಮ್ಯಾಕ್ಸಿಕ್ಯಾಬ್ ಸಹಿತ ಇತರೆ ಪ್ರಯಾಣಿಕರ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಕುಂದಾಪುರದಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಸುಸಜ್ಜಿತ ಹಾಗೂ ಮೂಲಭೂತ ಸೌಕರ್ಯಗಳುಳ್ಳ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಅವಶ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಬಸ್ ನಿಲ್ದಾಣದ ಸುತ್ತಮುತ್ತ ಖಾಸಗಿ ಪ್ರವರ್ತಕರು ತಮ್ಮ ವಾಹನಗಳನ್ನು ಆವ್ಯಾಹತವಾಗಿ ಅಲ್ಲಿ ನಿಲ್ಲಿಸಿಕೊಂಡು ಕಾರ್ಯಾಚರಣೆ ನಡೆಸುತಿದ್ದಾರೆ. ಅಲ್ಲದೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ತಮ್ಮ ವಾಹನಗಳನ್ನು ಬಸ್ ನಿಲ್ದಾಣದ ಮುಂದೆ ಅಕ್ರಮವಾಗಿ ನಿಲ್ಲಿಸಿಕೊಂಡು ಕಾರ್ಯಾಚರಣೆ ನಡೆಸುತಿದ್ದಾರೆ ಎಂದು ದೂರವಾಗಿದೆ.
ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯಿದೆ 1988, ಕರ್ನಾಟಕ ಪೊಲೀಸ್ ಕಾಯಿದೆ ಕಲಂ 31(1)(ಬಿ)ರನ್ವಯ ಬಸ್ನಿಲ್ದಾಣದ ಸುತ್ತಮುತ್ತ ಖಾಸಗಿ ಬಸ್, ಟೆಂಪೊ, ಮ್ಯಾಕ್ಸಿಕ್ಯಾಬ್ ವಾಹನಗಳನ್ನು ನಿಲುಗಡೆಗೊಳಿಸು ವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.