ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಸೆರೆ

Update: 2017-09-02 18:20 GMT

ಮಂಗಳೂರು, ಸೆ.2: ನಗರದ ಶಕ್ತಿನಗರದಲ್ಲಿರುವ ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ತೇಜಸ್ ಎಂಬವರಿಗೆ ತಲವಾರು ಮತ್ತು ಚೂರಿಯಿಂದ ಕೊಲೆಗೆ ಯತ್ನಿಸಿದ ನಾಲ್ಕು ಮಂದಿ ಆರೋಪಿಗಳನ್ನು ಕಂಕನಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಕ್ತಿನಗರ ನೀತಿನಗರದ ಪೃಥ್ವಿರಾಜ್ ಯಾನೆ ಪುಟ್ಟ (19), ವಿಶಾಲ್ ಯಾನೆ ವಿಶಾಲ್ ಕುಮಾರ್ (20), ಅಭಿಷೇಕ್ ಯಾನೆ ಮಣಿ (23), ಸಚಿನ್ (21) ಬಂಧಿತ ಆರೋಪಿಗಳು.

ತೇಜಸ್ ತನ್ನ ದ್ವಿಚಕ್ರ ವಾಹನದಲ್ಲಿ ಸಹೋದ್ಯೋಗಿ ಸಾಜು ಎಂಬವರನ್ನು ಕೂರಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಶಕ್ತಿನಗರ ಬೊಲ್ಯ ಶಾಲೆಯ ಬಳಿ ಆರೋಪಿಗಳು ತಡೆದು ನಿಲ್ಲಿಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದು ನಿಂದಿಸಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ರವಿ ನಾಯ್ಕ ಶನಿವಾರ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಿಲ್ಬರ್ಟ್ ಡಿಸೋಜ, ಮದನ್, ಸಂತೋಷ್, ವಿನೋದ್, ರವೀಂದ್ರನಾಥ ರೈ, ರಘುವೀರ್, ನೂತನ್ ಕುಮಾರ್, ಸಂದೀಪ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News