ಮರಳುಗಾರಿಕೆ: 25 ಮಂದಿಗೆ ಇಲಾಖೆಯಿಂದ ಪರವಾನಿಗೆ
Update: 2017-09-04 16:11 GMT
ಉಡುಪಿ, ಸೆ.4: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ದಲ್ಲಿ ಮರಳುಗಾರಿಕೆಗೆ ಇದುವರೆಗೆ ಒಟ್ಟು 25 ಮಂದಿ ನಿಗದಿತ ಹಣವನ್ನು ಕಟ್ಟಿ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೋದಂಡರಾಮಯ್ಯ ತಿಳಿಸಿದ್ದಾರೆ.
ಇವರಲ್ಲಿ ಇಬ್ಬರು ಮಾತ್ರ ಪಡುತೋನ್ಸೆ ಮತ್ತು ಹೂಡೆಗಳಲ್ಲಿ ಮರಳುಗಾರಿಕೆ ಯನ್ನು ಪ್ರಾರಂಭಿಸಿದ್ದು, ಉಳಿದವರು ಜಿಪಿಎಸ್ನ್ನು ಅಳವಡಿಸಿಕೊಂಡ ತಕ್ಷಣ ಮರಳುಗಾರಿಕೆಯನ್ನು ಆರಂಭಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 28 ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಇವುಗಳ ತೆರವಿಗೆ ಒಟ್ಟು 172 ಮಂದಿಗೆ ಮರಳುಗಾರಿಕೆಗಾಗಿ ಪರವಾನಿಗೆಯನ್ನು ನೀಡಲಾಗಿದೆ. ಇಂದು ಹತ್ತು ಮಂದಿ ಹಣ ಕಟ್ಟಿ ಪರವಾನಿಗೆ ಪಡೆದುಕೊಂಡಿದ್ದಾರೆ. ಧಕ್ಕೆಗಳ ಪರಿಶೀಲನೆಗಳು ಮುಗಿದ ಬಳಿಕ ಉಳಿದವರು ಬಂದಂತೆ ಪರವಾನಿಗೆ ನೀಡ ಲಾಗುವುದು ಎಂದವರು ಹೇಳಿದ್ದಾರೆ.