ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಅಭಿವೃದ್ಧಿ ಕಷ್ಟಸಾಧ್ಯ- ಶಾಸಕಿ ಶಕುಂತಳಾ ಶೆಟ್ಟಿ

Update: 2017-09-04 17:57 GMT

ಪುತ್ತೂರು, ಸೆ. 4: ಜನಸಂಖ್ಯೆ ಬೆಳೆದಂತೆ ಸಮಸ್ಯೆಗಳ ಸರಮಾಲೆಯೂ ಹೆಚ್ಚುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಆಗದೇ ಇದ್ದರೆ ದೇಶದ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಏರಿಕೆಯಿಂದ ಎದುರಾದ ಪ್ರತ್ಯಕ್ಷ ಸಮಸ್ಯೆಯೇ ತ್ಯಾಜ್ಯ. ಇದನ್ನುವಿಲೇವಾರಿ ಮಾಡುವುದೇ ತ್ರಾಸದಾಯಕವಾಗಿ ಪರಿಣಮಿಸಿ ಪರಿಹಾರವೇ ಕಾಣದಾಗಿದೆ. ತ್ಯಾಜ್ಯದ ಜತೆಗೆ ಮೂಲಸೌಕರ್ಯವೂ ಸಮಸ್ಯೆಯಾಗಿ ಕಾಡುತ್ತಿದೆ. ಏರುತ್ತಿರುವ ಜನಸಂಖ್ಯೆಗೆ ಮೂಲಭೂತ ಸೌಕರ್ಯ ನೀಡುವುದೇ ದೊಡ್ಡ ಸವಾಲಾಗಿದೆ ಎಂದರು.

ಸರಕಾರದ ವತಿಯಿಂದ ನೀಡುತ್ತಿದ್ದ ಜಾಗದ ಪ್ರಮಾಣ ಇದೀಗ 1 ಸೆಂಟ್ಸ್‌ಗೆ ಇಳಿದಿದೆ. ಅಂದರೆ ಜಾಗವೇ ಇಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಮನೆ ಬೇಕು ಎಂದು ಹೇಳುತ್ತೇವೆ. ಅಷ್ಟೂ ಜನರಿಗೆ ಸೂರು ಒದಗಿಸುವುದು ಸವಾಲೇ ಸರಿ. ಈ ಹಿನ್ನೆಲೆಯಲ್ಲಿ ಯೋಚಿಸುವಾಗ ಜನಸಂಖ್ಯೆಗೆ ಕಡಿವಾಣ ಹಾಕಲೇಬೇಕು. ಜನತೆಯ ಸಹಕಾರದಿಂದ ಮಾತ್ರ ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯ ಎಂದರು.

ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಸಮಾಜದಲ್ಲಿ ಗಂಡು- ಹೆಣ್ಣಿಗೆ ಸಮಾನ ಅವಕಾಶವಿದೆ. ಇಬ್ಬರು ಒಟ್ಟಾಗಿ ನಿರ್ಧಾರ ಕೈಗೊಂಡರೆ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯ. ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವ ಕಡೆಗೂ ಗಮನ ಹರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಹಲವು ಯೋಜನೆಗಳಿವೆ. ಇವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿ, ಅರಿವು ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಅನೇಕ ಸವಾಲುಗಳು ಅವರ ಎದುರಿಗಿದೆ. ಎಳವೆಯಲ್ಲೇ ಮದುವೆಯಾಗುವ ಹೆಣ್ಮಕ್ಕಳಿಗೆ ಸಮಸ್ಯೆ ಹೆಚ್ಚು. ಈ ಬಗ್ಗೆಯೂ ಅರಿವು ನೀಡುವ ಕೆಲಸ ನಡೆಯುತ್ತಿದೆ ಎಂದರು.

ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್ ಉಪಸ್ಥಿತರಿದ್ದರು. ಜನಸಂಖ್ಯೆ ನಿಯಂತ್ರಣದ ಬಗ್ಗೆ ಸವಣೂರು ಸರಕಾರಿ ಪ.ಪೂ. ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಶೊಭಾ ಹಾಗೂ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ಉಪನ್ಯಾಸ ನೀಡಿದರು. ಇದೇ ಸಂದರ್ಭ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಎಲಿಯಮ್ಮ ಜೋನ್ ಹಾಗೂ ಕೊಳ್ತಿಗೆ ಆಶಾ ಕಾರ್ಯಕರ್ತೆ ವೇದಾವತಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಸ್ವಾಗತಿಸಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಲೀನಾ ವಂದಿಸಿದರು. ತಾ.ಪಂ.ನ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News