ಶಾಲೆಗಳಲ್ಲಿ ಮಕ್ಕಳಿಗೆ ಸಾಮರಸ್ಯದ ಪಾಠ ಮಾಡಿ: ಶಿಕ್ಷಕರಿಗೆ ಸಚಿವ ರಮಾನಾಥ ರೈ ಕರೆ

Update: 2017-09-05 14:46 GMT

ಮಂಗಳೂರು, ಸೆ. 5: ಮುಗ್ಧ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿರುವುದರಿಂದ ಶಾಲೆಗಳಲ್ಲಿ ಸಾಮಾಜಿಕ ಸಾಮರಸ್ಯ ಉಳಿಸುವ ನಿಟ್ಟಿನಲ್ಲಿ ಬೋಧನೆಯನ್ನು ಶಿಕ್ಷಕರು ಮಾಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದ್ದಾರೆ.

ನಗರದ ಪುರಭವನದಲ್ಲಿ ಇಂದು ನಡೆದ ದ.ಕ. ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಫೀಮಿಗಿಂತ ದೊಡ್ಡ ಅಮಲು ಧರ್ಮದ್ದಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಧರ್ಮದ ಅಮಲು ಹತ್ತದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಶಿಲ್ಪಿಗಳನ್ನು ತಯಾರು ಮಾಡುವ ಜವಾಬ್ಧಾರಿ ಶಿಕ್ಷಕರದ್ದಾಗಬೇಕು ಎಂದು ಅವರು ಹೇಳಿದರು.

ಶಿಕ್ಷಕ ವೃತ್ತಿಯೆಂಬುದು ಸನ್ಯಾಸ ಸ್ವೀಕರಿಸಿದಂತೆ. ಅವರ ಮೇಲಿನ ಜವಾಬ್ಧಾರಿಯೂ ಅಧಿಕ. ಮಕ್ಕಳು ಶಿಕ್ಷಕರನ್ನು ಬಹುತೇಕವಾಗಿ ಅನುಸರಿಸುವುದರಿಂದ ಶಿಕ್ಷಕರು ಉತ್ತಮ ನಡವಳಿಕೆಯ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ, ಶಿಕ್ಷಕರಿಗೆ ಆರನೆ ವೇತನ ಆಯೋಗ ಶೀಘ್ರದ್ಲೇ ಜಾರಿಯಾಗಲಿದೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣದ ಜತೆಗೆ ಮೌಲ್ಯಾಧಾರಿತ ಹಾಗೂ ಆತ್ಮವಿಶ್ವಾಸ ಮೂಡಿಸುವ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರಾದ ಶೀನನಾಯ್ಕ, ಶಂಕರ, ನಾರಾಯಣ ಪೂಜಾರಿ, ಉದಯ ಕುಮಾರಿ, ಶಾರದಾ, ಯಶೋಧಾ ಎಂ.ಬಿ., ನಿಂಗರಾಜು ಪ್ರಶಸ್ತಿ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ಮಹಾದವ, ದಯಾನಂದ ಎನ್.ಕೆ., ಜಾನ್ ಚಂದ್ರನ್, ಶೇಖ್ ಆದಂ ಸಾಹೇಬ್, ವಿಶ್ವನಾಥ ಗೌಡ ಕೆ., ವಿನಯ ಕುಮಾರಿ, ಸತೀಶ್ ಭಟ್‌ರವರು ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.

ಇದೇ ವೇಳೆ 2016-17ನೆ ಸಾಲಿನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ಪಡೆದಿರುವ ವಸಂತಿ ಹಾಗೂ ಸಂಜೀವರನ್ನು ಸನ್ಮಾನಿಸಲಾಯಿತು.
ಸ್ವಚ್ಛ ಭಾರತ ವರ್ಷಾಚರಣೆಯ ಪ್ರಾರಂಭೋತ್ಸವ ಹಾಗೂ ಕಿರುಚಿತ್ರಗಳ ಬಿಡುಗಡೆ ಹಾಗೂ ಗುರುಚೇತನ ಕಾರ್ಯಕ್ರಮದ ಲಾಂಛನ ಹಾಗೂ ತರಬೇತಿ ಸಾಹಿತ್ಯ ಬಿಡುಗಡೆಯನು್ನ ಈ ಸಂದರ್ಭ ನೆರವೇರಿಸಲಾಯಿತು.

ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಶಿಕ್ಷಕರಾದ ಸ್ಟಾನಿ ತಾವ್ರೊ, ಅಲೋಶಿಯಸ್ ಡಿಸೋಜಾ, ಪ್ರವೀಣ್ ಕುಟಿನ್ನೋ, ಹರೀಶ್ ರೈ, ಅಂಬರೀಶ್, ಶಿವಶಂಕರ್ ಭಟ್, ಕೆ.ಎಚ್. ನಾಯಕ್, ಮಹಾಬಲ ಕುಲಾಲ್, ಭುಜಂಗ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿಯವರು ಜಲಧಾರಾ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿದರು. ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೊ ಗುರುಚೇತನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಮಂಜುಳಾ ಶೆಟ್ಟಿ ಮತ್ತು ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News