ಗೌರಿ ಲಂಕೇಶ್ ಅವರ ಹತೈಗೆ ಎಸ್.ಡಿ.ಪಿ.ಐ. ಖಂಡನೆ
ಮಂಗಳೂರು, ಸೆ.6: ಹಿರಿಯ ಪತ್ರಕರ್ತೆ, ಸಾಹಿತಿ, ಚಿಂತಕಿ ಮತ್ತು ಗೌರಿ ಲಂಕೇಶ್ ಅವರ ಹತೈಯನ್ನು ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದ, ಹೋರಾಟವೇ ಜೀವನ ಎಂಬಂತೆ ಎಲ್ಲಾ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ನೇತೃತ್ವವನ್ನು ವಹಿಸುತ್ತಿದ್ದ ವಿಚಾರವಾದಿಯನ್ನು ಇವತ್ತು ನಾಡು ಕಳೆದುಕೊಂಡಂತಾಗಿದೆ. ಅವರ ಅಗಲುವಿಕೆ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಎಸ್.ಡಿ.ಪಿ.ಐ. ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಯನ್ನು ಹತೈಗೈದು ವರ್ಷಗಳೇ ಕಳೆದರೂ ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಸಾಧ್ಯವಾಗಲಿಲ್ಲ. ಇದೀಗ ಅದೇ ರೀತಿಯಲ್ಲೇ ಫ್ಯಾಸಿಸ್ಟ್ ಶಕ್ತಿಗಳು ಮತ್ತೋರ್ವ ವಿಚಾರವಾದಿಯನ್ನು ಕೊಲೆ ನಡೆಸಿದೆ. ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಈ ಹತೈಯನ್ನು ಗಂಭೀರವಾಗಿ ಪರಿಗಣಿಸಿ ಕ್ಷಿಪ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.