ಸಿಬಿಐ ತನಿಖೆಗೂ ಸಿದ್ಧ : ಗೋಣಿಕೊಪ್ಪಲು ಎಪಿಎಂಸಿ ಸ್ಪಷ್ಟನೆ

Update: 2017-09-06 18:22 GMT

ಮಡಿಕೇರಿ,ಸೆ.6:ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುತ್ತಿರುವ ಕುರಿತು ಸಿಐಡಿ ತನಿಖೆಗೆ ಒತ್ತಾಯಿಸಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ಸ್ವಾಗತಿಸುವುದಾಗಿ ತಿಳಿಸಿರುವ ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷರಾದ ಸುವಿನ್ ಗಣಪತಿ, ಸಮಿತಿ ಸಿಬಿಐ ತನಿಖೆಯನ್ನು ಎದುರಿಸಲು ಕೂಡ ಸಿದ್ಧವೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿ ಕಾನೂನಿನ ಚೌಕಟ್ಟಿನಡಿ ಕಾರ್ಯದರ್ಶಿಯವರ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

 ಜಿಲ್ಲಾ ಕಾಂಗ್ರೆಸ್‍ನ ವಕ್ತಾರರಾದ ಟಾಟು ಮೊಣ್ಣಪ್ಪ ಅವರು ಯಾವುದೇ ಮಾಹಿತಿ ಇಲ್ಲದೆ, ರೈತರಲ್ಲಿ ಗೊಂದಲವನ್ನು ಸೃಷ್ಟಿಸುವ ಹೇಳಿಕೆಯನ್ನು ನೀಡಿದ್ದು, ಅವ್ಯವಹಾರದ ಆರೋಪವನ್ನು ಹೊರಿಸುವ ಮೂಲಕ ತೇಜೋವಧೆ ಮಾಡಿದ್ದಾರೆ. ಈ ಬಗ್ಗೆ ಒಂದು ವಾರದಲ್ಲಿ ಕ್ಷಮೆ ಕೇಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸುವಿನ್ ಗಣಪತಿ ಎಚ್ಚರಿಕೆ ನೀಡಿದರು.

ಕಾಳು ಮೆಣಸನ್ನು ಕಾನೂನಾತ್ಮಕವಾಗಿ ಆಮದು ಮಾಡಿಕೊಂಡಿದ್ದರೆ ಆಮದುದಾರರ ವಿರುದ್ಧ ಕ್ರಮ ಕೈಗೊಳ್ಳಲು ಎಪಿಎಂಸಿಗೆ ಸಾಧ್ಯವಿಲ್ಲ. ಆದರೂ ಆಡಳಿತ ಮಂಡಳಿ ಕಾಳು ಮೆಣಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಯೊಂದಿಗೆ ಸ್ಪಷ್ಟೀಕರಣ ಬಯಸಿದಾಗ ವಿಯೆಟ್ನಾಂನ ಕಾಳು ಮೆಣಸು ಎಂದೇ ಮಾರಾಟ ಮಾಡುತ್ತಿರುವ ಬಗ್ಗೆ ದಾಖಲಾತಿ ಸಹಿತ ತಿಳಿಸಿರುತ್ತಾರೆ. ಇಷ್ಟೊಂದು ನಿಖರತೆ ಇದ್ದರು ಟಾಟು ಮೊಣ್ಣಪ್ಪ ಅವರು ರಾಜಕೀಯ ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗಸ್ಟ್ 21 ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ತಾವೇ ಆಮದು ಕಾಳು ಮೆಣಸಿನ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಸಂಸದರಾದ ಪ್ರತಾಪ ಸಿಂಹ ಅವರ ಗಮನ ಸೆಳೆಯಲು ನಿರ್ಧರಿಸಲಾಗಿತ್ತು. ಆದರೆ, ನಾಮ ನಿರ್ದೇಶಿತ ಸದಸ್ಯರು ಇದನ್ನೆ ರಾಜಕೀಯ ದಾಳವನ್ನಾಗಿ ಮಾಡಿಕೊಂಡಿರುವುದು ಖಂಡನೀಯವೆಂದರು. ಹೊರ ದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಈ ಹಿಂದಿನ ಪ್ರಧಾನ ಮಂತ್ರ್ರಿಗಳಾದ ಪಿ.ವಿ.ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರು ಸಹಿ ಮಾಡಿದ್ದಾರೆ.ಈ ನೀತಿಯ ಪ್ರಕಾರ ಕಾಳು ಮೆಣಸು ಆಮದಾಗುತ್ತಿದ್ದು, ಕಾಂಗ್ರೆಸ್ ಮಂದಿ ಮಾಡುತ್ತಿರುವ ಆರೋಪವನ್ನು ಗಮನಿಸಿದರೆ ಇದರ ಹಿಂದೆ ಕೇರಳ ಕಾಳು ಮೆಣಸು ಲಾಬಿಯ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸುವಿನ್ ಗಣಪತಿ ಆರೋಪಿಸಿದರು.

 ಬೆಳೆಗಾರರ ಒಕ್ಕೂಟ ಕೇಂದ್ರದ ಬಳಿಗೆ ನಿಯೋಗ ತೆರಳಿದರೆ ಅದಕ್ಕೆ ಎಪಿಎಂಸಿ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲವಿದೆ. ಇದೇ ಮಾದರಿಯಾಗಿ ಕಾಂಗ್ರೆಸ್ಸಿಗರು ಕೂಡ ರಾಜ್ಯ ಸರ್ಕಾರದ ಬಳಿ ನಿಯೋಗ ತೆರಳಲಿ ಎಂದು ಅವರು ಹೇಳಿದರು. 

 ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ನೆರವಂಡ ಉಮೇಶ್ ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಸುವಿನ್ ಗಣಪತಿ, ಎಪಿಎಂಸಿ ರೈತರ ಹಿತ ದೃಷ್ಟಿಯನ್ನು ಕಾಯ್ದುಕೊಂಡಿದೆ ಎಂದರು. ಕೇವಲ ಮಾರುಕಟ್ಟೆ ಸುಂಕ ಸಂಗ್ರಹಿಸದೆ ವೀರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಗೋದಾಮು, ಕೃಷಿ ಕಣ, ಸಂಪರ್ಕ ರಸ್ತೆ, ಗ್ರಾಮೀಣ ಸಂತೆ, ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು. ಎಪಿಎಂಸಿ ಆವರಣದಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಗೋದಾಮಿಗೆ ಯಾವುದೇ ಫಲಾನುಭವಿ ಬಾರದ ಕಾರಣ ತಾತ್ಕಾಲಿಕವಾಗಿ ಮಾತ್ರ ಕಾಳು ಮೆಣಸು ವ್ಯವಹಾರದ ಸಂಸ್ಥೆಗೆ ನೀಡಲಾಗಿದೆಯೆಂದು ಸ್ಪಷ್ಟಪಡಿಸಿದರು.

 ರೈತರ ಹಿತದೃಷ್ಟಿಯನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಆರೋಪ ಮಾಡಿರುವುದು ಆಘಾತವನ್ನುಂಟು ಮಾಡಿದೆ. ರೈತರಿಂದ ಹಾಗೂ ವರ್ತಕರಿಂದ ಚುನಾಯಿತರಾಗಲು ಸಾಧ್ಯವಾಗದ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಪಿತೂರಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಸುವಿನ್ ಗಣಪತಿ, ರಾಜಕೀಯ ಷಡ್ಯಂತ್ರಗಳಿಗೆ ತಕ್ಕ ಉತ್ತರ ನೀಡುವುದಾಗಿ ತಿಳಿಸಿದರು. ವಿಯೆಟ್ನಾಂ ಕಾಳು ಮೆಣಸಿನ ಆಮದಿನ ಕುರಿತು ಉಂಟಾಗಿರುವ ಗೊಂದಲಗಳ ನಿವಾರಣೆಗೆ ಸಧ್ಯದಲ್ಲೆ ರೈತರ ಸಭೆಯನ್ನು ನಡೆಸುವುದಾಗಿ ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಾಲಕೃಷ್ಣ, ಸದಸ್ಯರುಗಳಾದ ಸುಜಾ ಪುಣಚ್ಚ, ವಿನು ಚಂಗಪ್ಪ, ಸುಬ್ರಮಣಿ ಹಾಗೂ ವರ್ತಕರ ಸಂಘದ ಕಿಲನ್ ಗಣಪತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News