ನೀರುಪಾಲಾದ ಸಹೋದರರು: ಮತ್ತೋರ್ವರ ಮೃತ ದೇಹ ಪತ್ತೆ
ಪುತ್ತೂರು, ಸೆ. 7: ಶಾಂತಿಮೊಗರು ಸೇತುವೆ ಬಳಿ ಕುಮಾರಧಾರಾ ನದಿಗೆ ಮಂಗಳವಾರ ಸ್ನಾನಕ್ಕಿಳಿದು ನೀರುಪಾಲಾದ ಸಹೋದರರಿಬ್ಬರ ಪೈಕಿ ಓರ್ವರ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿದ್ದು, ಗುರುವಾರ ಮತ್ತೊಬ್ಬರ ಮೃತದೇಹವೂ ಪತ್ತೆಯಾಗಿದೆ.
ಕಡಬ ಕುಟ್ರುಪ್ಪಾಡಿ ಗ್ರಾಮದ ಹರಿಪ್ರಸಾದ್ ಅವರ ಮೃತದೇಹ ಗುರುವಾರ ಮದ್ಯಾಹ್ನದ ವೇಳೆಗೆ ಘಟನೆ ನಡೆಸ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಕಡಬ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಬಿಟ್ಟು ಕೊಡಲಾಗಿದೆ. ಕಡಬ ಹೋಬಳಿಯ ಕುಟ್ರುಪ್ಪಾಡಿ ಗ್ರಾಮದ ಹರಿಪ್ರಸಾದ್, ಸತ್ಯಪ್ರಸಾದ್ ಸಹೋದರರು ತನ್ನ ಚಿಕ್ಕಪ್ಪನ ಮಗ ರೋಹಿತ್ನೊಂದಿಗೆ ಮಂಗಳವಾರ ಶಾಂತಿಮೊಗರು ಬಳಿ ಕುಮಾರಾಧಾರಾ ನದಿಗೆ ಸ್ನಾನಕ್ಕಿಳಿದ ಸಂದರ್ಭ ಹರಿಪ್ರಸಾದ್ ಹಾಗೂ ಸತ್ಯಪ್ರಸಾದ್ ನೀರಿನ ಸುಳಿಯಲ್ಲಿ ಸಿಲುಕಿ ನೀರುಪಾಲಾಗಿದ್ದರು.
ಈ ಪೈಕಿ ಸತ್ಯಪ್ರಸಾದ್ ಅವರ ಮೃತದೇಹ ಬುಧವಾರ ಘಟನಾ ಸ್ಥಳದಿಂದ ಸುಮಾರು 700 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಹರಿಪ್ರಸಾದ್ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿತ್ತು. ಗುರುವಾರ ಹರಿಪ್ರಸಾದ್ ಮೃತದೇಹ ಪತ್ತೆಯಾಗಿದೆ.