ಉಡುಪಿ: ಜಿಲ್ಲೆಯಾದ್ಯಂತ ಮೊಂತಿ ಫೆಸ್ಟ್ ಆಚರಣೆ
ಉಡುಪಿ, ಸೆ. 8: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿ ಭಾವದಿಂದ ಶುಕ್ರವಾರ ಆಚರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ತೆನೆಯನ್ನು ಆಶೀರ್ವಚಿಸಿ ಸಂದೇಶ ನೀಡಿದರು.
ಜಿಲ್ಲೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಜರುಗಿತು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ ವಲೇರೀಯನ್ ಮೆಂಡೊನ್ಸಾ ಸೇರಿದಂತೆ ಸಹಾಯಕ ಧರ್ಮಗುರು ವಂ ವಿಜಯ್ ಡಿಸೋಜಾ, ಅತಿಥಿ ಧರ್ಮಗುರುಗಳಾದ ವಂ ವಿಲಿಯಂ ಮಾರ್ಟಿಸ್, ವಂ ಚೇತನ್ ಲೋಬೊ ಉಪಸ್ಥಿತರಿದ್ದರು.
ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆರ್ಶಿವದಿಸಿ ಮೆರವಣಿಗೆಯಲ್ಲಿ ಚರ್ಚಿನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.
ಸಕ್ಕಡ್ ಸಾಂಗಾತಾ ಮೇಳ್ಯಾಂ, ಸಕ್ಕಡ್ ಲಾಗೇ ಸರಿಯಾ, ಅಮ್ಚೆ ತಾಳೇ ಏಕ್ ಕರಿಯಾ, ಮರಿಯೇಕ್ ಹೊಗೊಳ್ಸಿಯಾ (ಎಲ್ಲ ಒಂದಾಗೋಣ, ನಮ್ಮೆಲ್ಲರ ಕಂಠಗಳು ಒಂದಾಗಿ ಮರಿಯಾ ಕೀರ್ತನೆ ಹಾಡೋಣ) ಹಾಡುಗಳು ಇಗರ್ಜಿ, ಮನೆಗಳಲ್ಲಿ ಕೇಳಿಬಂತು.
ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜನವನ್ನು ತಯಾರಿಸಿ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು.
ಜಿಲ್ಲೆಯ ಕುಂದಾಪುರ, ಬಸ್ರೂರು, ಬೆಂದೂರು, ಕಾರ್ಕಳ, ಬ್ರಹ್ಮಾವರ ಇನ್ನಿತರ ಕಡೆಗಳಲ್ಲಿ ಭಕ್ತಿಭಾವದಿಂದ ಹಬ್ಬದ ಆಚರಣೆ ಜರುಗಿತು.