ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಾಮಾಜಿಕ ಕ್ಷೇಮಾಭಿವೃದ್ಧಿ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ
ಪಡುಬಿದ್ರೆ, ಸೆ. 10: ಬಂಟ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ವಿದ್ಯಾವಂತರನ್ನಾಗಿಸಿ ಅವರನ್ನೂ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದು ಥಾಣೆ ಕ್ರಿಸ್ಟಲ್ ಅಟೋಮೆಷಿನ್ ಪ್ರೈ. ಲಿಮಿಟೆಡ್ನ ಸಿಎಂಡಿ ಚಂದ್ರಶೇಖರ ಶೆಟ್ಟಿ ಸಲಹೆ ಮಾಡಿದ್ದಾರೆ.
ಪಡುಬಿದ್ರೆ ಬಂಟರ ಭವನದಲ್ಲಿ ರವಿವಾರ ನಡೆದ ಬಂಟರ ಯಾನೆ ನಾಡವರ ಸಂಘದ ವತಿಯಿಂದ ರೂ. 8 ಲಕ್ಷ ವೆಚ್ಚದಲ್ಲಿ ಸಿರಿಮುಡಿ ದತ್ತಿ ನಿಧಿ ಪ್ರಾಯೋಜಿತ ಸಾಮಾಜಿಕ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯೆಯಿಂದ ಬಡತನ ದೂರವಿಡಲು ಸಾಧ್ಯ. ಪೋಷಕರು ಮಕ್ಕಳನ್ನು ತುಲನೆ ಮಾಡುವುದನ್ನು ಬಿಟ್ಟು, ಸಂಸ್ಕಾರ ಸಂಸ್ಕೃತಿ ಕಲಿಸಿಕೊಡಬೇಕು. ಸಮಾಜದಲ್ಲಿ ಸಾಕಷ್ಟು ಮಂದಿ ಶ್ರೀಮಂತರಿದ್ದು, ಅವರ ಸಹಾಯ ಪಡೆದು ಸಿರಿಮುಡಿ ದತ್ತಿನಿಧಿಯಲ್ಲಿ ಇನ್ನಷ್ಟು ಮೊತ್ತವನ್ನು ಕ್ರೋಢೀಕರಿಸಬೇಕು ಎಂದು ಸಲಹೆ ನೀಡಿದರು.
ಮುಂಬೈನ ಆಹಾರ್ ಅಧ್ಯಕ್ಷ ಆದರ್ಶ ಬಿ ಶೆಟ್ಟಿ ಮಾತನಾಡಿ, ಬಡವರ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಉತ್ತಮ ಕಾರ್ಯ. ಗೌರಯುತವಾಗಿ ಉದ್ಯಮ ನಡೆಸುವುದರ ಜೊತೆಗೆ ಸಮಾಜವು ನಮಗೆ ಬೇಕು. ಆಹಾರ್ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದಲೂ ಮಾನ್ಯತೆ ಗಳಿಸಿದೆ. ಸಂಘಟನೆಯಲ್ಲಿ ಎಲ್ಲ ಜಾತಿ, ಧರ್ಮದವರಿದ್ದಾರೆ. ಹೆದ್ದಾರಿಗಳ ವಿಸ್ತರಣೆ ಹಾಗೂ ಜಿಎಸ್ಟಿ ಬಗ್ಗೆಯೂ ಸಂಘಟನೆ ಹೋರಾಟ ನಡೆಸುತ್ತಿದೆ ಎಂದರು.
ಮೇರ್ಕಳ ತ್ಯಾಂಪಣ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟರ ಸಂಘದ ಮಹಿಳಾ ವಿಭಾಗದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಸುಪಾಸಿನ 320 ವಿದ್ಯಾರ್ಥಿಗಳಿಗೆ 5.60ಲಕ್ಷ ರೂ. ವಿದ್ಯಾರ್ಥಿ ವೇತನ, 20 ವಿಕಲಚೇತನರಿಗೆ 80 ಸಾವಿರ ಸಹಾಯಧನ ಹಾಗೂ 84 ಮಂದಿ. 1.40 ವಿಧವಾ ವೇತನವನ್ನು ನೀಡಲಾಯಿತು.
ಮುಂಬೈನ ಕೈಗಾರಿಕೋದ್ಯಮಿ ಕೆ.ಎಂ. ಶೆಟ್ಟಿ, ಹೋಟೆಲ್ ಉದ್ಯಮಿ ಕರುಣಾಕರ ಆರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಗ ನಿರ್ದೇಶಕ ಪರಮಾನಂದ ಸಾಲ್ಯಾನ್, ನೃತ್ಯ ನಿರ್ದೇಶಕ ಮನೋಜ್ ಕಿನ್ನಿಗೋಳಿ, ನಟನೆ ಯಲ್ಲಿ ಸಾಧನೆ ಮಾಡಿದ ಸ್ವಾತಿ, ಕರಾಟೆಪಟು ಪವನ್ ಪುರುಷೋತ್ತಮ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, , ಸಿರಿಮುಡಿ ದತ್ತಿನಿಧಿ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ವೈ ಶಶಿಧರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಡಾ. ಮನೋಜ್ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರತ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಶೆಟ್ಟಿ ಇದ್ದರು.