ನಿನಾದದ ಕಹಳೆ ನಾಡಿನಾಧ್ಯಂತ ಮೊಳಗಲಿ: ಎಂ.ಡಿ.ಪಕ್ಕಿ

Update: 2017-09-10 17:42 GMT

ಭಟ್ಕಳ, ಸೆ.10: ಸ್ವಾರ್ಥವಿಲ್ಲದೆ ಒಂದು ಹುಲ್ಲು ಕಡ್ಡಿಯನ್ನು ಅಲುಗಾಡಿಸಲಾರೆ. ಎನ್ನುವ ಜನ ಸಂಘ ಸಂಸ್ಥೆಗಳು ಇಂದು ನಾಯಿಕೊಡೆಗಳಂತೆ ಬೆಳೆದು ಕೊಳ್ಳುತ್ತಿದೆ. ಇಂತಹ ವಾತಾವರಣದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಸರಕಾರದ ಯಾವ ನೆರವು ಪಡೆಯದೆ ನಿನಾದ ಸಾಹಿತ್ಯ ಸಂಗೀತ ಸಂಚಯ ಎನ್ನುವ ಸಾಂಸ್ಕೃತಿಕ ವೇದಿಕೆಯೊಂದು ಭಟ್ಕಳದಲ್ಲಿ ಪ್ರಕಾಶಿಸುತ್ತಿರುವುದು ನಮಗೆ ಹೆಮ್ಮೆ. ಈ ನಿನಾದದ ಕಹಳೆ ನಾಡಿನಾಧ್ಯಂತ ಮೊಳಗಲಿ ಎಂದು ತಾಲೂಕಿನ ಹಿರಿಯ ಕವಿ ಮಾಜಿ ಯೋಧರು ಆದ ಎಂ.ಡಿ.ಪಕ್ಕಿ ನುಡಿದರು.

ಅವರು ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ಮುಂದೆ ಹಮ್ಮಿಕೊಳ್ಳಲಿರುವ ದಸರಾ ಕಾವ್ಯೋತ್ಸವ ಅದ್ದೂರಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಿಲ್ಲಾಮಟ್ಟದ ಭಾವಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ನಿನಾದ ಇಂದು ತಾನು ಬೆಳಗುವುದರೊಂದಿಗೆ ಕತ್ತಲೆಯಲ್ಲಿರುವ ,ಬತ್ತಿ ಎಣ್ಣೆಗಳಿಲ್ಲದೆ ಸೊರಗುವ ಕೊರಗುವ ಅದೆಷ್ಟೋ ಪ್ರತಿಭಾನ್ವಿತ ಹಣತೆಗಳನ್ನು ಬೆಳಗಿಸುತ್ತಿರುವುದು ನಿಜಕ್ಕೂ ಸ್ಲಾಘನೀಯವಾದದ್ದು. ನಿನಾದದ ಪ್ರಧಾನ ಸಂಚಾಲಕರಾದ ಮುಂಡಳ್ಳಿಯವರನ್ನು ನಾವೆಲ್ಲರೂ ಅಭಿನಂದಿಸಬೇಕು ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರ್ಣಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಝೇಂಕಾರ ಮೆಲೋಡಿಸ್‌ನ ಜನಪ್ರೀಯ ಗಾಯಕರಾದ ರಾಜಾರಾಮ ಪ್ರಭುರವರು ಮಾತನಾಡಿ ಸಂಗೀತ ಎನ್ನುವುದು ಒಂದು ಸಮುದ್ರವಿದ್ದಂತೆ ಅದರಲ್ಲಿ ನಮಗೆ ದೊರೆತದ್ದು ಬೊಗೆಸೆಯಷ್ಟು ಮಾತ್ರ. ಹಾಗಾಗಿ ಅದು ನಿಂತ ನೀರಾಗದೆ ಸದಾ ಹರಿಯುವಂತೆ ನಾವು ಕೂಡ ಸತತ ಅಭ್ಯಾಸದಲ್ಲಿ ನಿರತರಾಗಬೇಕೆಂದು ಸ್ಪರ್ಧಾಳುಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು ಜನತಾ ವಿದ್ಯಾಲಯದ ಪ್ರಾನ್ಸುಪಾಲರು ಆದ ಅಮೃತ ರಾಮರಥ ಮಾತನಾಡಿ ಮೊದಲಿಗೆ ಚುಟುಕ ಬ್ರಹ್ಮ ದಿನಕರ ದೇಸಾಯಿಯವರ ಚುಟುಕಿನೊಂದಿಗೆ ಮಾತು ಆರಂಭಿಸಿ. ನಿನಾದದ ಸಾಮಥ್ಯ ಕೂಡ ದಿನಕರರಂತೆ ನಾಡೆಲ್ಲ ಪಸರಿಸಲಿ. ಇನ್ನಷ್ಟು ಕಲಾವಿದರಿಗೆ ಗಾಯಕರಿಗೆ ಆಶ್ರಯ ನೀಡಲಿ. ಅದಕ್ಕೆ ತಮ್ಮೆಲ್ಲರ ಸಹಕಾರ ಇರುವುದಾಗಿ ತಿಳಿಸಿದರು. ಸರಕಾರದ ಎಲ್ಲಾ ಸವಲತ್ತು ಪಡೆದವರು ಬಂದ ಹಣ ಖರ್ಚು ಮಾಡಲು ಹಿಂದೆಟು ಹಾಕುತ್ತಿದ್ದು ಆ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಖರ್ಚು ಮಾಡುತ್ತಿರುವಾಗ ನಿನಾದ ಸಂಘಟನೆ ಸ್ವಂತ ಖರ್ಚಿನಿಂದ ಕಾರ್ಯಕ್ರಮ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದರು.

ಕಾರ್ಯಕ್ರಮದ ಮೊದಲಿಗೆ ನಾಡಿನ ಹಿರಿಯ ಕವಿ ಚುಟುಕು ಬ್ರಹ್ಮ ದಿನಕರರ ಹುಟ್ಟಿದ ದಿನದ ಸಮಭ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ನಿನಾದದ ಪ್ರಧಾನ ಸಂಚಾಲಕ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ನಿನಾದ ಮುಂದಿನ ದಿನಗಳಲ್ಲಿ ಸುಗಮ ಸಂಗೀತ ಮತ್ತು ಸಾಹಿತ್ಯವನ್ನು ಜೊತೆಜೊತೆಯಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಹತ್ತು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಅದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ವಿಜೇತರಾದ ಗಾಯಕರಿಗೆ ದಸರಾ ಕಾವೋತ್ಸವ ವೇದಿಕೆಯಲ್ಲಿ ಗಣ್ಯರಿಂದ ಬಹುಮಾನ ನೀಡುವುದಾಗಿ ತಿಳಿಸಿದರು.

ಸಂಚಾಲಕಿ ರೇಷ್ಮಾ ಉಮೇಶ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕುಮಾರಿ ಪೂರ್ವಿ ಭಟ್ಕಳ ಪ್ರಾರ್ಥಿಸಿದರು. ನಿನಾದದ ಸದಸ್ಯರಾದ ಗೋಪಾಲ ಸೋಡಿಗದ್ದೆ, ಮಹೇಶ ನಾಯ್ಕ ಬಸ್ತಿ ಜಿಲ್ಲೆಯಿಂದ ಬಂದ ಅನೇಕ ಗಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News