ರಸ್ತೆ ಅಪಘಾತ: ಓರ್ವ ಮೃತ್ಯು; ಮೂರು ಮಂದಿಗೆ ಗಾಯ
Update: 2017-09-10 17:49 GMT
ಭಟ್ಕಳ, ಸೆ. 10: ಮುರುಡೇಶ್ವರದ ಬಸ್ತಿ ರಾ.ಹೆ. 66ರಲ್ಲಿ ರವಿವಾರ ನಡೆದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಕೇರಳದ ಕಣ್ಣೂರು ತಲಚೇರಿಯ ನಿವಾಸಿ ಭಾಸ್ಕರ್ (70) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಸುರೇಶ (34), ರವೀಂದ್ರನ್ (65) ಹಾಗೂ ಸಂಜೀವ್(40) ಎಂದು ಗುರುತಿಸಲಾಗಿದೆ.
ಇವರು ಕೇರಳದಿಂದ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ದರ್ಶನ ಮಾಡಿಕೊಂಡು ಮುರುಡೇಶ್ವರದಿಂದ ಮರಳಿ ಕೇರಳಕ್ಕೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಮೀನು ಲಾರಿಯೊಂದು ಇವರ ಕಾರಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಲಾರಿ ಚಾಲಕ ಮಂಜುನಾಥ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.