ಬೆಳ್ತಂಗಡಿ: ಸದ್ಭಾವನಾ ವೇದಿಕೆ ವತಿಯಿಂದ ಈದ್ ಸೌಹಾರ್ದ ಕೂಟ
ಬೆಳ್ತಂಗಡಿ, ಸೆ. 11: ಸದ್ಭಾವನಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಸೆ.10ರಂದು ಈದ್ ಸೌಹಾರ್ದ ಕೂಟ ನಡೆಯಿತು.
ಈ ಸಂದರ್ಭ ಶಾಂತಿ ಪ್ರಕಾಶನ ಮಂಗಳೂರು ಇದರ ಅದ್ಯಕ್ಷ ಮುಹಮ್ಮದ್ ಕುಂಞ ಮಾತನಾಡುತ್ತ ಬಹುಸಂಖ್ಯೆಯ ಸಜ್ಜನರು ಮೌನಿಗಳಾಗಿದ್ದಾರೆ, ಸಮಸ್ಯೆಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಪಟ್ಟಿ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅಲ್ಪ ಸಂಖ್ಯೆಯಲ್ಲಿರುವ ಅತ್ಯಾ ಚಾರಿಗಳು, ಭೃಷ್ಟರು, ಕೋಮುವಾದಿಗಳು ಒಗ್ಗಟ್ಟಾಗಿ ತಮ್ಮ ಕಾರ್ಯಗಳನ್ನು ಸಾಂಗವಾಗಿ ಮಾಡುತ್ತಾ ಸಾಗುತ್ತಿದ್ದಾರೆ. ಸಜ್ಜನರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡುವ ಅಗತ್ಯವಿದೆ. ಪಕ್ಕದ ಮನೆಯ ಗೋವಿಂದನ, ರಾಮಕೃಷ್ಣನ ಉತ್ತಮ ಸರ್ಟಿಫಿಕೇಟ್ ಸಿಗದೆ ಮುಸಲ್ಮಾನನಿಗೆ ಸ್ವರ್ಗಕ್ಕೆ ಹೋಗಲು ಅಸಾಧ್ಯ. ಇದು ಇಸ್ಲಾಮ್ ಮತ್ತು ಪ್ರವಾದಿಗಳು ಕಲಿಸಿದ ಪಾಠ. ಮನುಷ್ಯನೆಂದರೆ ಪರಸ್ಪರ ಬೆರೆಯಬೇಕು ಮತ್ತು ತಪ್ಪುಗಳನ್ನು ಇತರರ ಮೇಲಿನ ಕೋಪವನ್ನು ಮರೆಯಬೇಕು. ಇದುವೇ ಮನುಷ್ಯನ ಒಳ್ಳೆಯ ಗುಣ ಇದುವೇ ಧರ್ಮ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬ್ರದರ್ ಸದೀದ್ ಮುಹಮ್ಮದ್ ಕುರ್ ಆನ್ ಪಾರಾಯಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಗಂಗಾದರ ಮಿತ್ತಮಾರು, ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನ ಫಾ. ಬಿನೋಯ್ ಜೋಸೆಫ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದರಣೇಂದ್ರ ಕೆ.ಜೈನ್ ಶುಭಹಾರೈಸಿದರು.
ಕೆನರಾಬ್ಯಾಂಕ್ ನಿವೃತ ಡೆಪ್ಯುಟಿ ಮೆನೇಜರ್, ಸಧ್ಬಾವನಾ ವೇದಿಕೆ ಜಪ್ಪು ಮಂಗಳೂರು ಇದರ ಅಧ್ಯಕ್ಷ ಸಭಾಧ್ಯಕ್ಷತೆ ವಹಿಸಿದ್ದರು. ಸದ್ಭಾವನಾ ವೇದಿಕೆ ಬೆಳ್ತಂಗಡಿ ತಾಲೂಕು ಸಂಚಾಲಕ ಹಾಜಿ ಅಬ್ದುಲ್ಲತೀಫ್ ಸಾಹೇಬ್ ಸ್ವಾಗತಿಸಿದರು. ಎಂ.ಎ.ಜಲೀಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.