ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎನ್ಡಬ್ಲ್ಯೂಎಫ್ ಪ್ರತಿಭಟನೆ
Update: 2017-09-13 08:16 GMT
ಮಂಗಳೂರು, ಸೆ.13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಲೇಖಕಿ ಜ್ಯೋತಿ ಗುರುಪ್ರಸಾದ್, ಗೌರಿ ಕೇವಲ ಪತ್ರಕರ್ತೆಯಲ್ಲ. ಆಕೆ ಸಮಾಜದ ಧ್ವನಿ. ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ. ಆಕೆಯ ಹತ್ಯೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಅಭಿಪ್ರಾಯ ಭೇದ ಏನೇ ಇದ್ದರೂ ಅದನ್ನು ಮಾತುಕತೆ, ಚರ್ಚೆ, ಚಳವಳಿ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನ: ಹತ್ಯೆಯ ಮೂಲಕ ಬಾಯ್ಮುಚ್ಚಿಸುವುದಲ್ಲ. ಹೇಡಿಗಳಷ್ಟೇ ಇಂತಹ ದುಷ್ಕೃತ್ಯ ಮಾಡಲು ಸಾಧ್ಯ ಎಂದರು.
ಈ ಸಂದರ್ಭ ಎನ್ಡಬ್ಲ್ಯೂಎಫ್ ರಾಷ್ಟ್ರೀಯ ಸಮಿತಿ ಸದಸ್ಯೆ ಶಾಹಿದಾ ಅಸ್ಲಮ್, ಕೆ.ಸಿ.ರೋಡ್ನ ಝೀನತ್ ಎಜುಕೇಶನಲ್ ಟ್ರಸ್ಟ್ನ ಪ್ರಾಂಶುಪಾಲೆ ಮೆಹನಾಝ್, ಯಶೋಧಾ, ನಸ್ರಿಯಾ, ಫಾತಿಮಾ ನಸೀಮಾ, ಶಹನಾಝ್, ಮೈಮೂನಾ ಮತ್ತಿತರರಿದ್ದರು.