ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು: ದೂರು

Update: 2017-09-13 13:56 GMT

ಬಂಟ್ವಾಳ, ಸೆ. 13: ಬಿ.ಸಿ.ರೋಡಿನ ದಸ್ತಾವೇಜು ಬರಹಗಾರ ಕೆ.ಪಿ. ಬನ್ನಿಂತಾಯ ಅವರ ಮನೆಗೆ ಹಾಡಹಗಲೇ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಮಧ್ಯಾಹ್ನ 2:30ರಿಂದ 3:30ರ ಮಧ್ಯೆ ಕಳ್ಳತನ ಕೃತ್ಯ ನಡೆದಿದೆ. ಕೆ.ಪಿ. ಬನ್ನಿಂತಾಯ ಮತ್ತವರ ಪುತ್ರ ವಕೀಲ ರಾಘವೇಂದ್ರ ಬನ್ನಿಂತಾಯ ತಮ್ಮ ಕಚೇರಿಯಲ್ಲಿದ್ದರು. ಸೊಸೆ ಕೆಲಸಕ್ಕೆ ಹೋಗಿದ್ದರೆ. ಮಕ್ಕಳು ಶಾಲೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದು, ಕಳ್ಳರು ಇದೇ ಸಮಯವನ್ನು ಸದುಪಯೋಗಪಡಿಸಿ ಮನೆಗೆ ನುಗ್ಗಿದ್ದಾರೆ. ಮನೆಯ ಮುಂಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಬೆಡ್ ರೂಂನಲ್ಲಿದ್ದ ಮೂರು ಕಪಾಟನ್ನು ಒಡೆದು ಅದರಲ್ಲಿದ್ದ ಸುಮಾರು 15 ಪವನು ಚಿನ್ನಾಭರಣ, ಒಂದು ಜೊತೆ ವಜ್ರದ ಬೆಂಡೋಲೆ, 40 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಅವರ ಮನೆಯ ಗೇಟಿನ ಸದ್ದು ಕೇಳಿ ಪಕ್ಕದ ಮನೆಯ ಮಹಿಳೆಯೋರ್ವರು ನೋಡಿದಾಗ ಮೂವರು ಅಪರಿಚಿತ ವ್ಯಕ್ತಿಗಳು ಗೇಟ್ ಹಾರಿ ಬಸ್ ನಿಲ್ದಾಣದತ್ತ ಓಡಿದ್ದಾರೆ ಎನ್ನಲಾಗಿದೆ. ತಕ್ಷಣ ಅವರು ವಕೀಲ ರಾಘವೇಂದ್ರರಿಗೆ ಮಾಹಿತಿ ನೀಡಿದ್ದು, ಬಸ್ ನಿಲ್ದಾಣ ಸಹಿತ ಎಲ್ಲಡೆ ಹುಡುಕಾಡಿದರೂ ಕಳ್ಳರ ಸುಳಿವು ಪತ್ತೆಯಾಗಲಿಲ್ಲ. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಕಳವಾದ ನಗ, ನಗದಿನ ಮೌಲ್ಯ 4.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News