ಮೀನುಗಾರನ ಕೊಲೆ: ಆರೋಪಿ ಬೋಟು ಚಾಲಕ ಸೆರೆ
ಗಂಗೊಳ್ಳಿ, ಸೆ.16: ಬೋಟು ಕಟ್ಟುವ ವಿಚಾರವಾಗಿ ಬೋಟ್ ಚಾಲಕನೊಬ್ಬ ಮೀನುಗಾರನಿಗೆ ಹಲ್ಲೆಗೈದು, ಹೊಳೆಯ ನೀರಿಗೆ ಬೀಳಿಸಿ ಕೊಲೆ ಮಾಡಿದ್ದಾನೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಗಂಗೊಳ್ಳಿ ಬಂದರಿನಲ್ಲಿ ನಡೆದಿದೆ.
ತೆಕ್ಕಟ್ಟೆಯ ನಿವಾಸಿ, ಪ್ರಕಾಶ್ ಪೂಜಾರಿ(40) ಮೃತರು ಎಂದು ಗುರುತಿಸಲಾಗಿದೆ. ಆರೋಪಿ ಭಟ್ಕಳದ ಚಂದ್ರಕಾಂತ (33) ಎಂಬಾತನನ್ನು ಗಂಗೊಳ್ಳಿ ಪೊಲೀಸರು ಇಂದು ಮಧ್ಯಾಹ್ನ ಬಂಧಿಸಿ, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ಸೆ. 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗಣೇಶ್ ಖಾರ್ವಿ ಎಂಬವರ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಪೂಜಾರಿ, ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಮೀನುಗಾರಿಕೆ ಮುಗಿಸಿದ ನಂತರ ಚಂದ್ರಕಾಂತನೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭ ಚಂದ್ರಕಾಂತ ಪ್ರಕಾಶ್ ರಿಗೆ ಹಲ್ಲೆ ಮಾಡಿದ್ದು, ನೀರಿಗೆ ಬಿದ್ದ ಪ್ರಕಾಶ್ ಪೂಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಇಂದು ಸಂಜೆ 6.30ರ ಸುಮಾರಿಗೆ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.