ಬಿ.ಸಿ.ರೋಡ್ ಸರಕಾರಿ ಕಾಲೇಜು: ಐಕ್ಯಗಾನ ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ, ಸೆ. 17: ತಾಲೂಕಿನ ಬಿ.ಸಿ.ರೋಡ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಮತ್ತು ಸಾಹಿತ್ಯ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಐಕ್ಯಗಾನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಬಿ.ಸಿ.ರೋಡ್ ಕಚೇರಿ ಆಪ್ತ ಕಾರ್ಯದರ್ಶಿ, ಬರಹಗಾರ ಚಂದ್ರಶೇಖರ ಪಾತೂರು ಅವರು ಪ್ರಧಾನ ಭಾಷಣ ಮಾಡಿದರು.
ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸೇವೆಯು ಜೀವನಕ್ಕೆ ಅನುಭವ ನೀಡುವಂತೆ ಜೀವನ ಅನುಭವವು ಸಾಹಿತ್ಯ ರಚನೆಗೆ ಪ್ರೇರಕವಾಗುತ್ತದೆ ಎಂದರು.
ಇದೇ ವೇಳೆ ಬಂಟ್ವಾಳ ಅರಿವು ಯುವ ಸಂವಾದ ಕೇಂದ್ರದ ನಿರ್ದೇಶಕ ಮಣಿನಾಲ್ಕೂರು ಮತ್ತು ತಂಡದಿಂದ ಸಾಮರಸ್ಯ ಗೀತೆ ಗಾಯನ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಸಾಹಿತ್ಯ ಸಂಘದ ನಿರ್ದೇಶಕ ದಾಮೋದರ ಇ., ಯಶೋಧಾ ಕೆ., ಎನ್ನೆಸ್ಸೆಸ್ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಕೆ. ಮತ್ತಿತರರು ಇದ್ದರು. ವಿದ್ಯಾರ್ಥಿನಿ ಜಸೀಲಾ ಫರ್ವಿನ್ ಸ್ವಾಗತಿಸಿ, ಹೇಮಾಕ್ಷಿ ವಂದಿಸಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಗೌಸಿಯಾ ಕಾರ್ಯಕ್ರಮ ನಿರೂಪಿಸಿದರು.