ಮುಸ್ಲಿಂ ಒಕ್ಕೂಟದಿಂದ ರಾ.ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರ ಭೇಟಿ
ಮಂಗಳೂರು, ಸೆ. 19: ಪೂರ್ವಗೃಹ ಪೀಡಿತ ಇಲಾಖೆಯ ಅಧಿಕಾರಿಗಳು ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದಾಗಿ ದ.ಕ. ಜಿಲ್ಲೆಯಲ್ಲಿ ಮುಸ್ಲಿಮರು ಮತೀಯ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಜಿಲ್ಲೆಯ ಮುಸ್ಲಿಮರ ಬಗೆಗಿನ ನಿಲುವನ್ನು ಬದಲಿಸಲು ಸೂಕ್ತ ರೂಪುರೇಷೆಗಳನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಅವಪ ನೇತೃತ್ವದಲ್ಲಿ ನಿಯೋಗವು ಇತ್ತೀಚೆಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಶಿಕ್ಷಣ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಜಿಲ್ಲೆಯ ಮುಸ್ಲಿಂ ಸಮುದಾಯದ ಉತ್ತಮ ಕೊಡುಗೆಯನ್ನು ನೀಡಿದೆ. ಆದರೂ ದಶಕಗಳಿಂದೀಚೆಗೆ ಮತೀಯ ತಾರತಮ್ಯವನ್ನು ಎದುರಿಸುತ್ತಿದೆ. ಇತ್ತೀಚೆಗೆ ಬಂಟ್ವಾಳ ಪೊಲೀಸರು ಧಾರ್ಮಿಕ ಗ್ರಂಥದ ಮೌಲ್ಯಚ್ಯುತಿಗೊಳಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಕೆರಳಿಸಿರುವುದರೊಂದಿಗೆ ಘಟನೆಯನ್ನು ವರದಿ ಮಾಡಿದ ಕನ್ನಡ ದೈನಿಕ ಪತ್ರಿಕೆಯ ವರದಿಗಾರನನ್ನು ಅನ್ಯಾಯವಾಗಿ ಬಂಧಿಸಿದ್ದರು. ಈ ಬಗ್ಗೆ ಮುಸ್ಲಿಂ ಸಮುದಾಯ ಪ್ರತಿಭಟನೆಗೆ ಸಜ್ಜಾಗುತ್ತಿದೆ. ಜಿಲ್ಲೆಯ ಮುಸ್ಲಿಮರ ಬಗೆಗಿನ ನಿಲುವನ್ನು ಬದಲಿಸಲು ಸೂಕ್ತ ರೂಪುರೇಷೆ ಗಳನ್ನು ಅನುಷ್ಠಾನಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಮುಹಮ್ಮದ್ ಹನೀಫ್ ಯು., ಹಮೀದ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಹಿದಾಯತ್ ಮಾರಿಪಳ್ಳ, ಹಿದಾಯತ್ ಕೃಷ್ಣಾಪುರ, ಬಿ.ಎಚ್.ಅಬ್ದುಲ್ ಕರೀಂ, ಹಮೀದ್ ಫರಂಗಿಪೇಟೆ ಮತ್ತಿತರರು ಉಪಸ್ಥಿತರಿದ್ದರು.