ಮುದ್ರಾಡಿ: ಸೆ.21ರಿಂದ ನವರಂಗೋತ್ಸವ
Update: 2017-09-20 16:54 GMT
ಹೆಬ್ರಿ, ಸೆ.20: ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿಯ 17ನೇ ವರ್ಷದ ‘ನವರಂಗೋತ್ಸವ’ ಏಣಗಿ ಬಾಳಪ್ಪ ಸ್ಮಾರಕ ಅಖಿಲ ಭಾರತ ರಂಗೋತ್ಸವ ಸೆ.21ರಿಂದ 30ರವರೆಗೆ ನಾಟ್ಕ ಮುದ್ರಾಡಿ ಬಿ.ವಿ.ಕಾರಂತ ಬಯಲು ರಂಗಸ್ಥಳದಲ್ಲಿ ನಡೆಯಲಿದೆ.
ಗುರುವಾರ ಸಂಜೆ ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ನವರಂಗೋತ್ಸವ ಉದ್ಘಾಟಿಸುವರು. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕ ಮಹಾದೇವಪ್ಪ, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಉಪಸ್ಥಿತರಿರುವರು.
ರಂಗ ನಟ ನಿರ್ದೇಶಕ ಲತೇಶ್ ಮೋಹನದಾಸ್ ಪೂಜಾರಿ ಮುಂಬೈ ಇವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರತಿದಿನ ಸಂಜೆ ಗಣ್ಯರ ಸಮ್ಮುಖದಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಮತ್ತು ನಾಟಕ ನಡೆಯಲಿದೆ ಎಂದು ಮ ತುಳುವೆರ್ ಪ್ರಕಟಣೆ ತಿಳಿಸಿದೆ.