ದ.ಕ. ಆಟೋಮೊಬೈಲ್ ಆಂಡ್ ಟೈರ್ ಡೀಲರ್ಸ್ ಸಂಘದಿಂದ ಶ್ರೀ ಆರ್. ಅತ್ಮಾನಾಥನ್ ಅವರಿಗೆ ಸನ್ಮಾನ
ಮಂಗಳೂರು,ಸೆ.21:ಆಟೋಮೊಬೈಲ್ ಬಿಡಿಭಾಗಗಳ ವ್ಯಾಪಾರದಲ್ಲಿ ವಿಶೇಷ ಸೇವೆಗಾಗಿ ಮದ್ರಾಸ್ ಆಟೋ ಸರ್ವಿಸ್ (ಟಿವಿಎಸ್ ಗ್ರೂಪ್)ನ ಮಾಜಿ ಪ್ರಾದೇಶಿಕ ಮ್ಯಾನೇಜರ್ ಶ್ರೀ ಆರ್. ಅತ್ಮಾನಾಥನ್ ಅವರಿಗೆ ದ.ಕ.ಆಟೋಮೊಬೈಲ್ ಆಂಡ್ ಟೈರ್ ಡೀಲರ್ಸ್ ಸಂಘದ ವತಿಯಿಂದ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಗರದ ಪೊಂಪೆ ಚರ್ಚ್ ಸಭಾಂಗಣದಲ್ಲಿ ಭಾನುವಾರ ಸೆ.17ರಂದು ನಡೆದ ಸಂಘದ 33ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಆರ್. ಅತ್ಮಾನಾಥನ್ 1982 ರಿಂದ 1996 ರವರೆಗೆ 14 ವರ್ಷಗಳ ಕಾಲ ಮಂಗಳೂರಿನಲ್ಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಹೊಸದಾಗಿ ರೂಪುಗೊಂಡ ಸಂಘಟನೆಗಾಗಿ ಸದಸ್ಯತ್ವವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಶ್ರೀ ಕಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಶ್ರೀ ಕೆ. ವಿಲಾಸ್ ಕುಮಾರ್, ಖಜಾಂಚಿ ಶ್ರೀ ಮಾರೂರು ಶಶಿಧರ್ ಪೈ, ಜಂಟಿ ಕಾರ್ಯದರ್ಶಿ ಶ್ರೀ ಆರ್. ಪಿ. ಡಿಸೋಜಾ, ಜಂಟಿ ಖಜಾಂಚಿ ಶ್ರೀ ಲಕ್ಷ್ಮಿನಾರಾಯಣ ನಾಯಕ್ ಮತ್ತು ಪೋಷಕ ಶ್ರೀ ಕೆ.ಜಿ.ಶೆಣೈ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ 22 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಸ್ಸೆಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗಾಗಿ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಪೈಕಿ ಸ್ವ್ವಚ್ಚ ಭಾರತ್ ಅಭಿಯಾನದ ಅಂಗವಾಗಿ ಕು. ಬಿಂದು ಮತ್ತು ಕು. ಬಿಂದಿಯಾ ಅವರಿಗೆ ತಮ್ಮ ತಾಯಿಯರೂಂದಿಗೆ ವಿಶೇಷ ಗೌರವವನ್ನು ನೀಡಲಾಯಿತು. ಅವರ ತಾಯಿಯರಾದ ಶ್ರೀಮತಿ ಶೀಲಾ ಮತ್ತು ಶ್ರೀಮತಿ ರೇವತಿ ಅವರು ಸಂಘದ ಸದಸ್ಯರ ಸ್ವಚ್ಚತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.