‘ಮಾರಿಕಾಡು’ ವೇಷಧಾರಿಯ ಹಣ ವೃದ್ಧಾಶ್ರಮಕ್ಕೆ ಹಸ್ತಾಂತರ
ಉಡುಪಿ, ಸೆ.22: ಈ ಬಾರಿ ಶ್ರೀಕಷ್ಣಜನ್ಮಾಷ್ಟಮಿಯ ಪ್ರಯುಕ್ತ ‘ನಮ್ಮ ಭೂಮಿ’ಯ ರಾಮಾಂಜಿ ‘ಮಾರಿಕಾಡು’ ವೇಷಧರಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಉಡುಪಿ ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ಇಂದು ಹಸ್ತಾಂತರಿಸಿದ್ದಾರೆ.
ಈ ಬಾರಿ ಸಂಗ್ರಹಿಸಿದ ಒಟ್ಟು 1.14ಲಕ್ಷ ರೂ. ಮೊತ್ತದಲ್ಲಿ ವೇಷ ಸೇರಿದಂತೆ ಇತರ ಖರ್ಚುಗಳನ್ನು ತೆಗೆದು ಉಳಿದ 70ಸಾವಿರ ರೂ.ನಲ್ಲಿ 10ಸಾವಿರ ರೂ. ಮಂಗಳೂರಿನ ಅಶಕ್ತ ಕುಟುಂಬಕ್ಕೆ ಮತ್ತು 40ಸಾವಿರ ರೂ. ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡಿದ್ದು, ಉಳಿದ ಹಣವನ್ನು ರಾಮಾಂಜಿಯನ್ನು ಈ ಮಟ್ಟಕ್ಕೆ ಬೆಳೆಸಿದ ಕುಂದಾಪುರದ ನಮ್ಮ ಭೂಮಿಗೆ ಮೀಸಲಿರಿಸಿದ್ದಾರೆ.
ಇಂದು ಕೊರಂಗ್ರಪಾಡಿಯ ವೃದ್ಧಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಹಣ ವನ್ನು ಆಶ್ರಮದ ಮೇಲ್ವಿಚಾರಕ ಪಿ.ಕುಮಾರ್ ಅವರಿಗೆ ಹಸ್ತಾಂತರಿಸಲಾ ಯಿತು. ಮುಖ್ಯ ಅತಿಥಿಗಳಾಗಿ ಆಶ್ರಮದ ವೈದ್ಯೆ ಡಾ.ಕೀರ್ತಿ ಪಾಲನ್, ನಮ್ಮ ಭೂಮಿಯ ಗಣಪತಿ, ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಲಾವಿದ ರಾಮಾಂಜಿಯನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಕರ್ವಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.