ಮಂಗಳೂರು: ರೈಲು ಢಿಕ್ಕಿ ಹೊಡೆದು ಬಾಲಕ ಮೃತ್ಯು
ಮಂಗಳೂರು, ಸೆ.23: ರೈಲು ಢಿಕ್ಕಿ ಹೊಡೆದು 6 ವರ್ಷದ ಮಗು ಮೃತಪಟ್ಟಿರುವ ಘಟನೆ ಜಪ್ಪು ಮಹಾಕಾಳಿಪಡ್ಪು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮಹಾಕಾಳಿಪಡ್ಪು ಕೊಬ್ಬರಿಗೆ ಎಂಬಲ್ಲಿನ ನಿವಾಸಿ ಅನ್ವರ್ ಎಂಬವರ ಪುತ್ರ ಮುಹಮ್ಮದ್ ಹುಸೇನ್ ಹಾಫಿಲ್ (6) ಮೃತ ಬಾಲಕ.
ಈತ ಜಪ್ಪು ಸೈಂಟ್ ರೀಟಾ ಶಾಲೆಯ ಪ್ರಥಮ ತರಗತಿಯ ವಿದ್ಯಾರ್ಥಿ.ಹಾಫಿಲ್ ಮತ್ತು ನಾಲ್ಕು ವರ್ಷಗಳ ಆತನ ತಮ್ಮ ಇಬ್ಬರೂ ಚಾಕಲೇಟ್ ತರಲೆಂದು ರೈಲ್ವೆ ಹಳಿ ಸಮೀಪದ ಮಸೀದಿ ರಸ್ತೆಗೆ ಬಂದಿದ್ದರು. ಚಾಕಲೇಟ್ ಖರೀದಿಸಿ ಹಿಂದಿರುಗುವಾಗ ನಾಲ್ಕು ವರ್ಷದ ಬಾಲಕ ಹಳಿಯನ್ನು ದಾಟಿದ್ದರೆ, ಹಾಫಿಲ್ ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಬಡ ಕುಟುಂಬದವರಾಗಿರುವ ಹಾಫಿಲ್ನ ತಂದೆ ಅನ್ವರ್ 6 ತಿಂಗಳ ಹಿಂದಷ್ಟೇ ವಿದೇಶಕ್ಕೆ ತೆರಳಿದ್ದರು. ಅನ್ವರ್ ಅವರು ಸೌದಿಯಲ್ಲಿ ಚಾಲಕ ವೃತ್ತಿಯಲ್ಲಿದ್ದಾರೆ. ಅನ್ವರ್ ಅವರಿಗೆ ಮೂವರು ಪುತ್ರರು. ಹಾಫಿಲ್ ಹಿರಿಯ ಮಗ.ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಗಳು: ಸದ್ದಾಮ್ ಹುಸೈನ್ ಕಲ್ಲಾಪು