ಮೂಲಭೂತ ಸೌಕರ್ಯ ಒದಗಿಸದೆ ಡಿಜಿಟಲ್ ಇಂಡಿಯಾ ಯಶಸ್ಸು ಅಸಾಧ್ಯ: ಎಸ್.ಡಿ.ಶ್ರೀನಿವಾಸನ್
ಉಡುಪಿ, ಸೆ. 24: ಭಾರತದಲ್ಲಿ ಪ್ರಸ್ತುತ 1.1ಬಿಲಿಯನ್ ಮಂದಿ ಮಾತ್ರ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಬಡವರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ರೈತರು ಇನ್ನೂ ಮೊಬೈಲ್ ಹೊಂದಿಲ್ಲ. ಈ ವ್ಯವಸ್ಥೆ ಇವರ ಬಳಿಗೆ ತಲುಪುವವರೆಗೆ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಮತ್ತು ವಿಜಯ ಬ್ಯಾಂಕ್ ವರ್ಕರ್ಸ್ ಆರ್ಗನೈಝೇಶನ್ನ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಶ್ರೀನಿವಾಸನ್ ಹೇಳಿದ್ದಾರೆ.
ಉಡುಪಿಯ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ವಿಜಯ ಬ್ಯಾಂಕ್ ವರ್ಕ್ಸರ್ಸ್ ಆರ್ಗನೈಝೇಶನ್ನ 14ನೇ ಪ್ರಾದೇಶಿಕ ಸಮ್ಮೇಳನ ಹಾಗೂ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಹೆಚ್ಚಿನ ಕಡೆಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗುವುದೇ ಇಲ್ಲ. ಬಹು ತೇಕ ಮಂದಿಗೆ ಮೊಬೈಲ್ ಬಳಕೆ ಮಾಡುವುದೇ ಗೊತ್ತಿಲ್ಲ. ಹೀಗಿರುವಾಗ ಡಿಜಿಟಲ್ ಇಂಡಿಯಾ ಹೇಗೆ ಯಶಸ್ವಿಯಾಗಲು ಸಾಧ್ಯ. ಸರಕಾರ ಮೊದಲು ಡಿಜಿಟಲೀಕರಣಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಬೇಕು ಎಂದರು.
ಕೇಂದ್ರ ಸರಕಾರ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲು ಹೊರಟಿರು ವುದು ತೀವ್ರ ಖಂಡನೀಯ. ಇದರಿಂದ ಬಂಡವಾಳಶಾಹಿಗಳು ಹಣ ಮಾಡು ತ್ತಾರೆಯೇ ಹೊರತು ಜನಸಾಮ್ಯಾನರಿಗೆ ಯಾವುದೇ ಒಳಿತು ಆಗುವುದಿಲ್ಲ ಎಂದು ಆರೋಪಿಸಿದ ಅವರು, ದೇಶದ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯನ್ನು ಸರಕಾರ ಕೈಬಿಡಬೇಕು. ಇದರಿಂದ ಬ್ಯಾಂಕ್ಗಳ ಸಮಸ್ಯೆ ಪರಿಹಾರವಾಗುವ ಬದಲು ಇನ್ನು ಹೆಚ್ಚಿನ ಸಮಸ್ಯೆಗಳು ಹುಟ್ಟುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮುಖ್ಯಸ್ಥ ಹಾಗೂ ಉಪಮಹಾ ಪ್ರಬಂಧಕ ಎಂ.ಜೆ.ನಾಗರಾಜ್, ಆರ್ಗನೈಝೇಶನ್ನ ಅಧ್ಯಕ್ಷ ಕೆ.ಮುದ್ದಣ್ಣ ಶೆಟ್ಟಿ, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿದರು.
ಅಧ್ಯಕ್ಷತೆಯನ್ನು ಆರ್ಗನೈಝೇಶನ್ನ ಕಾರ್ಯಾಧ್ಯಕ್ಷ ಡಿ.ಗೋಪಾಲಕೃಷ್ಣ ವಹಿಸಿದ್ದರು. ಮಲ್ಲಿಕಾರ್ಜುನ, ಚಂದ್ರಶೇಖರ್ ಶೆಟ್ಟಿ, ಅರುಣ್ ಪ್ರಕಾಶ್ ಶೆಟ್ಟಿ, ಚಂದ್ರಶೇಖರ್, ಆರ್ಗನೈಝೇಶನ್ನ ಪ್ರಾದೇಶಿಕ ಕೋಶಾಧಿಕಾರಿ ಗಣೇಶ್ ಕೆ.ಜಿ. ಉಪಸ್ಥಿತರಿದ್ದರು.
ಪ್ರಾದೇಶಿಕ ಅಧ್ಯಕ್ಷ ಎಸ್.ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಪ್ರಾದೇಶಿಕ ಕಾರ್ಯದರ್ಶಿ ಯು.ಕುಪ್ಪಯ್ಯ ಬಿಲ್ಲವ ವಂದಿಸಿದರು. ಸುೇಂದ್ರ ಕಾರ್ಯಕ್ರಮ ನಿರೂಪಿಸಿದರು.