ರಂಗಭೂಮಿ ತನ್ನ ಶಕ್ತಿ ಕಳೆದುಕೊಂಡಿದೆ: ಗೋಪಾಲಕೃಷ್ಣ ನಾಯರಿ
ಮುದ್ರಾಡಿ, ಸೆ.25: ಸಾಮಾಜಿಕ ಪಿಡುಗು, ಅನಿಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜೊತೆಗೆ ರಂಗಭೂಮಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಕಳವಳ ವ್ಯಕ್ತ ಪಡಿಸಿದ್ದಾರೆ.
ಅವರು ಇತ್ತೀಚೆಗೆ ಮುದ್ರಾಡಿ ನಾಟ್ಕದೂರಿನ ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿಯ 17ನೇ ವರ್ಷದ ನವರಂಗೋತ್ಸವ ಏಣಗಿ ಬಾಳಪ್ಪ ಸ್ಮಾರಕ ಅಖಿಲ ಭಾರತ ರಂಗೋತ್ಸವಕ್ಕೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಸಮಾಜಕ್ಕೆ, ಜೀವನಕ್ಕೆ ಅತ್ಯುತ್ತಮ ಸಂದೇಶ ನೀಡಬೇಕಾದ ರಂಗಭೂಮಿ ಇಂದು ಮನರಂಜನೆಯ ಕೇಂದ್ರಗಳಾಗುತ್ತಿರುವುದು ಅ್ಯಂತ ಬೇಸರದ ಸಂಗತಿ ಎಂದರು.
ಬಂಡವಾಳ ಹೂಡುವ ಭಾವನೆ: ಮಕ್ಕಳಲ್ಲಿ ನಾವು ಬಂಡವಾಳ ಹೂಡುವ ಭಾವನೆಯನ್ನು ಬೆಳೆಸುತ್ತಿದ್ದೇವೆ. ಸಂವೇದನೆಯ ಭಾವನೆಯನ್ನು ಬೆಳೆಸುತ್ತಿಲ್ಲ. ಇದು ಜೀವನದ ಅಪಾಯಕಾರಿ ಬೆಳವಣಿಗೆ ಎಂದು ಹಿರಿಯ ರಂಗ ನಿರ್ದೇಶಕ ಕರ್ನಾಟಕ ನಾಟಕ ಅಕಾಡೆಮಿ ಸದ್ಯ ಬಾಸುಮ ಕೊಡಗು ಹೇಳಿದರು.
ನವರಂಗೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ರಂಗನಿರ್ದೇಶಕ ಗುರುರಾಜ ಮಾರ್ಪಳ್ಳಿ, ಮುದ್ರಾಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ರಂಗಭೂಮಿ ಸೇವೆ ಐತಿಹಾಸಿಕ ದಾಖಲೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುದ್ರಾಡಿ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಧರ್ಮಯೋಗಿ ಮೋಹನ್ ಆರ್ಶೀವಚನ ನೀಡಿದರು. ರಂಗನಿರ್ದೇಶಕ ವಸಂತ ಬನ್ನಾಡಿ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಸುಧೀಂದ್ರ ಮೋಹನ್, ಕಮಲಾ ಮೋಹನ್, ಡಾ. ಜಯಪ್ರಕಾಶ್ ಮಾವಿನಕುಳಿ ಉಪಸ್ಥಿತರಿದ್ದರು.
ಬಳಿಕ ಸುಕುಮಾರ್ ಮೋಹನ್ ನಿರ್ದೇಶನದಲ್ಲಿ ಕಾರ್ಕಳ ಭುವನರಂಗ ತಂಡದ ಸದಸ್ಯರಿಂದ ಮಣ್ಣಿ ಕನ್ನಡ ನಾಟಕ ಪ್ರದರ್ಶನಗೊಂಡಿತು. ಇದೇ ವೇಳೆ ಆದಿಶಕ್ತಿ, ನಂದಿಕೇಶವರ ದೇವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ 46ನೇ ವರ್ಷದ ದಸರಾ ಮಹೋತ್ಸವ ಧರ್ಮದರ್ಶಿ ಧರ್ಮಯೋಗಿ ಮೋಹ್ ನೇತೃತ್ವದಲ್ಲಿ ಆರಂಭಗೊಂಡಿತು.